ಯುಕೆಜಿ ವಿದ್ಯಾರ್ಥಿಯ ಪ್ರಾಣಕ್ಕೆ ಸಂಚಕಾರ ತಂದ ಖಾಸಗಿ ಶಾಲೆ ಕುರಿತ ವರದಿ ಇಲ್ಲಿದೆ

ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ಪೋಷಕರು‌ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಸಾವಿರಾರು ರೂಪಾಯಿ ಶುಲ್ಕವನ್ನು ಕಟ್ಟಿ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಆಶಿಸುತ್ತಾರೆ. ಆದರೆ ಖಾಸಗಿ ಶಾಲಾ ಆಡಳಿತ ಮಂಡಳಿ‌ ನಿರ್ಲಕ್ಷ್ಯವು ಮಕ್ಕಳ ಜೀವಕ್ಕೆ ಎರವಾಗುವಂತಿದೆ. ವಿಜಯಪುರ ‌ಜಿಲ್ಲೆಯಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಖಾಸಗಿ ಶಾಲೆ ಯುಕೆಜಿ ವಿದ್ಯಾರ್ಥಿ ಜೀವ ಯಮನ ಪಾದ ಸೇರಿದೆ. ಪೋಷಕರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ. ಯುಕೆಜಿ ವಿದ್ಯಾರ್ಥಿಯ ಪ್ರಾಣಕ್ಕೆ ಸಂಚಕಾರ ತಂದ ಖಾಸಗಿ ಶಾಲೆ ಕುರಿತ ವರದಿ ಇಲ್ಲಿದೆ ನೋಡಿ.

ಆ ತಾಯಿಗೆ ಆತನೊಬ್ಬನೆ ಮಗ. ಪತಿಯಿಂದ ದೂರವಾಗಿದ್ದ ಆಕೆಗೆ ಆ ಪುಟ್ಟ ಬಾಲಕನೇ ಸರ್ವಸ್ವ. ಮಗ ಬೆಳೆದು ದೊಡ್ಡವನಾಗಲಿ ಒಳ್ಳೆಯ‌ ವಿದ್ಯಾವಂತನಾಗಲಿ ಎಂದು ಆಕೆ ಕೂಲಿ ನಾಲಿ ಮಾಡಿ ಮಗನನ್ನು ಸಾಕುತ್ತಿದ್ದಳು. ಒಳ್ಳೆಯ ಶಿಕ್ಷಣ ಪಡೆಯಲಿ ಅಂತಾ ಖಾಸಗಿ ಶಾಲೆಗೂ ಮಗನ್ನು ಸೇರಿಸಿದ್ದಳು.

ಆದರೆ ವಿಧಿಯಾಟ ಆ ಶಾಲೆ ಆಕೆಯ ಬಾಳಿಗೆ ಬೆಂಕಿಯಿಟ್ಟಿದ್ದೆ. ಬಾಳಿ ಬದುಕಬೇಕಿದ್ದ ಬಾಲಕ ಮಸಣ ಸೇರಿದ್ದಾನೆ. ಪುಟ್ಟ ಬಾಲಕನ ಸಾವು ಆಕೆಯನ್ನು ಕಣ್ಣಿರಲ್ಲಿ ಕೊರಗುವಂತೆ ಮಾಡಿದೆ. ಹೀಗೆ ವಿಜಯಪುರದ ಬಿ ಎಲ್ ಡಿ ಇ ಆಸ್ಪತ್ರೆಯ ಆವರಣದಲ್ಲಿ ಕಣ್ಣಿರಿಡುತ್ತಿರುವ ಈಕೆಯೆ ಹೆಸರು ಗಂಗಾ ರೋಡಗಿ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾವಿನಳ್ಳಿ ಗ್ರಾಮದ ನಿವಾಸಿ‌. ಗಂಡನನ್ನು ಬಿಟ್ಟು ದೂರವಾದ ಬಳಿಕ ಇದ್ದ ಒಬ್ಬನೇ ಮಗ ಐದು ವರ್ಷದ ಶಿವರಾಜ್ ರೋಡಗಿ ಜೊತೆಗೆ ಜೀವನ ನಡೆಸುತ್ತಿದ್ದಳು. ಕೂಲಿ ನಾಲಿ ಮಾಡಿ ಮಗನನ್ನು ಶಾಲೆಗೆ ಕಳುಹಿಸುತ್ತಿದ್ದಳು. ಆದರೆ ಇಂದು ವಿಧಿಯಾದ ಶಾಲೆಗೆ ಹೋದ ಮಗ ವಾಪಸ್ ಮನೆಗೆ ಬರಲೇ ಇಲ್ಲ.

ಇಂಡಿ ಪಟ್ಟಣದಲ್ಲಿರುವ ಆರ್ ಎಂ ಶಹಾ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಬಾಲಕ ಶಿವಾರಾಜ್ ಶಾಲೆಯ ಒಂದನೇ ಮಹಡಿಯಿಂದ ನೀರಿನ ಟ್ಯಾಂಕ್ ಮೇಲೆ ಬಿದ್ದಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಆತನನ್ನ ಇಂಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ತರಲಾಗಿದೆ. ಅಷ್ಟರೊಳಗಾಗಿ ಬಾಲಕ ಸಾವಪ್ಪಿದ್ದಾನೆ. ಆದರೆ ಬಾಲಕ ಮೃತಪಟ್ಟರು ಸಹ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಬಾಲಕ ಶಾಲೆಯಲ್ಲಿ ಬಿದ್ದಿದ್ದಾನೆ ಆಸ್ಪತ್ರೆಗೆ ಬನ್ನಿ ಎಂದಷ್ಟೇ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರಂತೆ.

ಬಾಲಕನನ್ನು ಆಸ್ಪತ್ರೆಗೆ ತಂದ ವಿಷಯ ತಿಳಿದ ಸಂಬಂಧಿಕರು ಬಂದು ನೋಡಿದಾಗ ಬಾಲಕ ಸಾವನಪ್ಪಿದ್ದ. ಈ ಬಗ್ಗೆ ವೈದ್ಯರನ್ನ ಕೇಳಿದಾಗಿ ಶಾಲಾ ಆಡಳಿತ ಮಂಡಳಿಯವರು ಮಗುವನ್ನು ಕರೆದುಕೊಂಡ ಬರುವ ಮೊದಲೇ ಮಗು ಸಾವನಪ್ಪಿದೆ ಎಂದು ತಿಳಿಸಿದ್ದಾರೆ. ಇದರಿಂದ ಸಂಬಂಧಿಗಳು ಆಕ್ರೋಶಗೊಂಡ ವಿಚಾರ ತಿಳಿಯುತ್ತಿದ್ದಂತೆಯೇ ಆಡಳಿತ ಮಂಡಳಿಯವರು ಪರಾರಿಯಾಗಿದ್ದಾರೆ.

ಈ ವೇಳೆ ಶಾಲೆಯ ಪರವಾಗಿ ಮಾತನಾಡಲು ಬಂದ ಮುಖಂಡರನ್ನ ಮೃತರ ಸಂಬಂಧಿಗಳು ತರಾಟೆಗೆ ತೆಗೆದುಕೊಂಡರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ವಿಷಯ ತಿಳಿದ ಇಂಡಿ ಪೊಲೀಸರು ವಿಜಯಪುರಕ್ಕೆ ಆಗಮಿಸಿ ಮೃತ ಬಾಲಕನ ಸಂಬಂಧಿಗಳು ಹಾಗೂ ಪೋಷಕರು ಜೊತೆ ಮಾತುಕತೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಸದ್ಯ ಇಂಡಿ ಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇತ್ತ ಶಾಲಾ ಆಡಳಿತ ಮಂಡಳಿಯವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ. ಶಾಲಾ ಆಡಳಿತ ಮಂಡಳಿ ಮೇಲೆ ಕಾನೂನು‌ ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.