ಗೃಹಜ್ಯೋತಿ ಯೋಜನೆ ಕಾರ್ಯಕ್ರಮಕ್ಕೆ ಅಜಯ್ ಸಿಂಗ್ ಗೈರು, ರೆಬಲ್ ಪಟ್ಟಿಗೆ ಮತ್ತೊಬ್ಬ ಕೈ ಶಾಸಕ ?

ಕಲಬುರಗಿ ಕರ್ನಾಟಕದಲ್ಲಿ ಆಡಳಿತರೂಢ ಕಾಂಗ್ರೆಸ್​ ಪಕ್ಷದಲ್ಲಿ ಸಚಿವರ ವಿರುದ್ಧ ಸ್ವಪಕ್ಷದ ಶಾಸಕರು ಅಸಮಾಧಾನ ಹೊರಹಾಕುತ್ತಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಪುತ್ರನೂ ಆಗಿರುವ ಜೇವರ್ಗಿ ತಾಲೂಕಿನ ಕಾಂಗ್ರೆಸ್ ಶಾಸಕ ಡಾ. ಅಜಯ್​ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಗೃಹಜ್ಯೋತಿ ಯೋಜನೆ ಕಾರ್ಯಕ್ರಮಕ್ಕೆ ಗೈರಾಗಿರುವ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ, “ಅವಕಾಶ ಕಿತ್ತುಕೊಳ್ಳಬಹುದೇ ಹೊರತು ಸಾಮರ್ಥ್ಯ, ಜನಪ್ರಿಯತೆಯನಲ್ಲ” ಎಂದು ಬರೆದುಕೊಂಡಿದ್ದಾರೆ 200 ಯುನಿಟ್ ​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಇಂದು ಕಲಬುರಗಿ ನಗರದಲ್ಲಿ ಚಾಲನೆ ನೀಡಲಾಯಿತು. ಆದರೆ ತನ್ನ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗಿಯಾಗಿದ್ದರೂ ಡಾ.ಅಜಯ್​ ಸಿಂಗ್​ ಗೈರಾಗಿದ್ದಾರೆ.

ಅಜಯ್ ಸಿಂಗ್ ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ಕಾಂಗ್ರೆಸ್​​ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಅಜಯ್ ಸಿಂಗ್ ಅವರು ದೆಹಲಿಯಲ್ಲಿದ್ದುಕೊಂಡೇ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಅಜಯ್ ಸಿಂಗ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಮಂತ್ರಿಗಿರಿ ಸಿಗದ ಹಿನ್ನೆಲೆ ಮುನಿಸುಗೊಂಡಿದ್ದಾರೆ.

ಇತ್ತೀಚೆಗಷ್ಟೇ, ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಶಾಸಕರಾದ ಬಸರಾಜ ರಾಯರೆಡ್ಡಿ, ಬಿಆರ್ ಪಾಟೀಲ್ ಅಸಮಾಧಾನ ಹೊರಹಾಕಿದ್ದು, ರಾಯರೆಡ್ಡಿ ಅವರಂತೂ ನೇರನೇರವಾಗಿ ಮುನಿಸು ಬಹಿರಂಗಪಡಿಸುತ್ತಿದ್ದಾರೆ. ಅಲ್ಲದೆ, ಕೆಲವು ಶಾಸಕರು ಸಚಿವರ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಿದ್ದರು. ಈ ಎಲ್ಲಾ ರೆಬಲ್ ಶಾಸಕರ ಪಟ್ಟಿಗೆ ಇದೀಗ ಅಜಯ್ ಸಿಂಗ್ ಸೇರ್ಪಡೆಯಾದಂತಿದೆ.