ಹಾವೇರಿ ಜಿಲ್ಲಾಸ್ಪತ್ರೆ ಬೆನ್ನಲ್ಲೇ ಈಗ ಸೋರುತ್ತಿದೆ ಹಾವೇರಿ ತಹಶೀಲ್ದಾರ್ ಕಚೇರಿ, ಟಾರ್ಪಲ್​ನಿಂದ ದಾಖಲೆಗಳ ರಕ್ಷಣೆ

ಹಾವೇರಿ, ಜು.26: ಜಿಲ್ಲಾಸ್ಪತ್ರೆ ಬೆನ್ನಲ್ಲೇ ಇದೀಗ ಹಾವೇರಿ ತಹಶೀಲ್ದಾರ್ ಕಚೇರಿ ಸೋರುತ್ತಿದೆ. ಹೌದು ನಿನ್ನೆ(ಜು.25) ಜಿಲ್ಲಾಸ್ಪತ್ರೆಯ ಕಟ್ಟಡ ಸೋರುತ್ತಿರುವ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೆ ಸ್ವತಃ ಸಿಎಂ ಸಿದ್ಧರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸೋರುತ್ತಿರುವುದನ್ನು ಪರಿಶಿಲಿಸಿ ಸ್ಥಳದ್ಲಲೇ ಆರೋಗ್ಯ ಇಲಾಖೆಯ ಮುಖ್ಯ ಇಂಜಿನಿಯರ್​ನನ್ನು ಅಮಾನತು ಮಾಡಿದ್ದರು. ಅದರಂತೆ ಇದೀಗ ತಹಶೀಲ್ದಾರ್ ಕಚೇರಿ ಸೋರುತ್ತಿದ್ದು, ಸಿಬ್ಬಂದಿಗಳು ಕಚೇರಿಯಲ್ಲಿ ಟಾರ್ಪಲ್ ಕಟ್ಟಿ ದಾಖಲೆ ರಕ್ಷಿಸುತ್ತಿದ್ದಾರೆ.

ಬಕೆಟ್ ಇಟ್ಟು ನೀರು ಹೊರಹಾಕುತ್ತಿರುವ ಕಚೇರಿ ಸಿಬ್ಬಂದಿ

ಇನ್ನು ಮಳೆಯಿಂದ ಭೂದಾಖಲೆ ಕಚೇರಿ, ಸರ್ವೆ ಇಲಾಖೆ ಕೊಠಡಿಯಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನಲೆ ಸಿಬ್ಬಂದಿಗಳು ಬಕೆಟ್ ಇಟ್ಟು ನೀರು ಹೊರಹಾಕುತ್ತಿದ್ದಾರೆ. ಪಹಣಿಪತ್ರ, ಆಸ್ತಿಪತ್ರ ಸೇರಿ ವಿವಿಧ ದಾಖಲೆ ರಕ್ಷಣೆಗೆ ಹರಸಾಹಸ ಮಾಡುತ್ತಿದ್ದು, ಈ ವೇಳೆ ತಾಲೂಕಿನ ರೈತರ ಮಹತ್ವದ ದಾಖಲೆ ಹಾನಿಯಾಗಿರುವ ಸಾಧ್ಯತೆಯಿದೆ.

ನಿನ್ನೆ ಸೋರುತ್ತಿದ್ದ ಜಿಲ್ಲಾಸ್ಪತ್ರೆ

ಕಳೆದ ನಾಲ್ಕು ವಾರದಿಂದ ಹಾವೇರಿ ಜಿಲ್ಲೆಯಲ್ಲಿ ಆಗುತ್ತಿರುವ ಮಳೆಯ ಪರಿಣಾಮ, ನಿನ್ನೆ(ಜು.26) ಹಾವೇರಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್​‘ನ ಮೆಲ್ಚಾವಣಿ ಸಂಪೂರ್ಣವಾಗಿ ಸೋರುತ್ತಿದೆ. ವಾರ್ಡ್​ನ ಕಿಟಕಿ ಗಾಜು ಇಲ್ಲದೆ ರಾತ್ರಿಯಲ್ಲ ಚಳಿಯಲ್ಲಿಯೇ ಬಾಣಂತಿಯರು ಮಲಗಬೇಕು. ಇದರ ಪರಿಣಾಮ ಬಾಣಂತಿಯರು ಹಾಗೂ ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಹೃದಯ ವಿದ್ರವಾಕ ಘಟನೆಯ ಬಗ್ಗೆ ನಿನ್ನೆ ಬೆಳಿಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ಧರಾಮಯ್ಯ ಅವರು ಹಾವೇರಿ ನಗರಕ್ಕೆ ಆಗಮಿಸುತ್ತಿದ್ದಂತೆ ನೇರವಾಗಿ ಜಿಲ್ಲಾಸ್ಪತ್ರೆಗೆ ಬಂದು ಬಾಣಂತಿಯರಿಂದ ಮಾಹಿತಿ ಪಡೆದಿದ್ದರು.

ಜೊತೆಗೆ ಪರಿಸ್ಥಿತಿ ಕಂಡು ಗರಂ ಆದ ಸಿಎಂ ಸಿದ್ಧರಾಮಯ್ಯರವರು ವೈದ್ಯಾಧಿಕಾರಿಗಳ ವಿರುದ್ದ ಕಿಡಿಕಾರಿದ್ರು, ನಾಲ್ಕನೇ ಮಹಡಿ ಕಟ್ಟುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದಕ್ಕೆ ಈ ರೀತಿ ಆಗಿದೆ ಎಂದು ಹೇಳುತ್ತಿದ್ದಂತೆ ಆರೋಗ್ಯ ಇಲಾಖೆಯ ಇಂಜಿನಿಯರ್ ಮಂಜುನಾಥ್​ನನ್ನು ಸ್ಥಳದಲ್ಲೆ ಅಮಾನತ್ತು ಮಾಡಿ ಆದೇಶ ಹೊರಡಿಸಿದ ಘಟನೆ ನಡೆದಿತ್ತು.