ಬೆಂಗ್ಳೂರಲ್ಲಿ ಕದ್ರು, ಚೆನ್ನೈನಲ್ಲಿ ಮಾರಿದ್ರು- ಕೊನೆಗೂ ಸಿಕ್ಕಿಬಿದ್ದ ಟೊಮೆಟೋ ಕಳ್ಳರು

ಬೆಂಗಳೂರು: ಟೆಮೆಟೋ ತುಂಬಿದ್ದ ಬೊಲೆರೋ ವಾಹನ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬೆಂಗಳೂರಲ್ಲಿ ವಾಹನವನ್ನು ಕದ್ದು ಬಳಿಕ ಟೊಮೆಟೋವನ್ನು ಚೆನ್ನೈಗೆ ಸಾಗಿಸಿ ಮಾರಾಟ ಮಾಡಿದ್ದಾರೆ. ಬಳಿಕ ಖಾಲಿ ವಾಹನವನ್ನು ಪೀಣ್ಯ ಬಳಿ ನಿಲ್ಲಿಸಿ ಪರಾರಿಯಾಗಿದ್ದರು. ಕಳೆದ 11 ದಿನಗಳಿಂದಲೂ ಈ ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ತಿಂಗಳ 10 ರಂದು ರೈತರು ಚಿತ್ರದುರ್ಗದಿಂದ ಆರ್‍ಎಂಸಿ ಯಾರ್ಡ್‍ಗೆ ಟೊಮೆಟೋ ಲೋಡ್ ಅನ್ನು ತಂದಿದ್ದರು. ರೈತರು ಯಾವಾಗ ವಾಹನವನ್ನು ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದಾರೋ ಆಗ ಬಂದ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೋ ಹೊತ್ತೊಯ್ದಿದ್ದರು.

ಕಾರಿನಲ್ಲಿ ಬಂದಿದ್ದ ಮೂವರು ವಾಹನವನ್ನು ಹೈಜಾಕ್ ಮಾಡಿದ್ದರು. ಟೊಮೆಟೋ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್‍ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದರು. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‍ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಬೆದರಿಸಿದ್ದರು. ಬಳಿಕ ಆನ್‍ಲೈನ್ ಮೂಲಕ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಾಹನವನ್ನು ಕದ್ದೊಯ್ದಿದ್ದರು.