ಚಂದ್ರಯಾನ-3 ಭಾರತದ ಭರವಸೆ, ಕನಸುಗಳನ್ನ ಹೊತ್ತೊಯ್ಯಲಿದೆ – ಪ್ರಧಾನಿ ಶುಭಹಾರೈಕೆ

ನವದೆಹಲಿ: ಚಂದ್ರನ ಮೇಲೆ ಗಗನನೌಕೆ ಇಳಿಸಿ ಅಧ್ಯಯನ ಮಾಡುವ ಉದ್ದೇಶದ ಚಂದ್ರಯಾನ-3 ಕಾರ್ಯಕ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಚಂದ್ರಯಾನ-3 ಉಡಾವಣೆ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಹಾರೈಸಿದ್ದಾರೆ.

ಚಂದ್ರಯಾನ-3 ಕುರಿತು ಟ್ವೀಟ್‌ ಮಾಡಿರುವ ಮೋದಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023 ರ ಜುಲೈ 14 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಿದೆ. ಚಂದ್ರಯಾನ-3 ನಮ್ಮ ಮೂರನೇ ಚಂದ್ರಯಾನ. ಅದರ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಬರೆದುಕೊಂಡಿದ್ದಾರೆ.

ಆಂಧ್ರಪ್ರದೇಶದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌, ರೋವರ್‌ ಹೊತ್ತ ರಾಕೆಟ್‌ ಇಂದು (ಶುಕ್ರವಾರ) ಮಧ್ಯಾಹ್ನ 2:35 ಕ್ಕೆ ನಭಕ್ಕೆ ಹಾರಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಸಿದ್ಧತೆ ಪೂರ್ಣಗೊಳಿಸಿದೆ.