5 ಕೆಜಿ ಅಕ್ಕಿಗೆ‌ ಕೊರತೆ ಇದ್ರೆ ಬೇಳೆ, ಎಣ್ಣೆ, ಬೆಲ್ಲ ವಿತರಿಸಿ; ವಿಧಾನಸಭೆಯಲ್ಲಿ ಕಾಂಗ್ರೆಸ್​ಗೆ ಹೆಚ್​ಡಿ ಕುಮಾರಸ್ವಾಮಿ ಸಲಹೆ

ಬೆಂಗಳೂರು: ಇಂದು (ಜು.12) ನಡೆದ ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದು ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ‌ ಕೊರತೆ ಇದ್ರೆ ಸಮಸ್ಯೆ ಬಗೆಹರಿಯುವವರೆಗೆ ಬೇಳೆ, ಎಣ್ಣೆ, ಬೆಲ್ಲ ವಿತರಿಸಬಹುದು ಎಂದು ಸಲಹೆ ನೀಡಿದ್ದಾರೆ.

ಅನ್ನಭಾಗ್ಯದಲ್ಲಿ ಐದು ಕೆಜಿ ಅಕ್ಕಿಗೆ‌ ಕೊರತೆ ಇದೆ. ಪೌಷ್ಠಿಕ ಆಹಾರದ ಕೊರತೆ ಇರುವವರಿಗೆ ಬೇಳೆ, ಎಣ್ಣೆ, ಬೆಲ್ಲ, ಮುಂತಾದ ಪದಾರ್ಥ ಕೊಡಬಹುದು. ಗೃಹಲಕ್ಷ್ಮಿ ಯೋಜನೆಯಲ್ಲಿ ಕುಟುಂಬದ ಸಹಬಾಳ್ವೆ ಹಾಳಾಗದಂತೆ ಕ್ರಮ ವಹಿಸಿ. ಯುವಭತ್ಯೆ ಯೋಜನೆಯಡಿ ಡಿಪ್ಲೊಮಾ ಪದವೀಧರರಿಗೆ ಒಂದೂವರೆ ಸಾವಿರ ಮಾತ್ರ ಯಾಕೆ? ನಿರುದ್ಯೋಗಿ ಪದವೀಧರರಿಗೆ 3000 ಆದ್ರೆ ಡಿಪ್ಲೋಮಾದವರಿಗೆ 1.5 ಸಾವಿರ ಮಾತ್ರ ಯಾಕೆ? ಈ ವರ್ಷದ ನಿರುದ್ಯೋಗಿಗಳು ಮಾತ್ರ ನಿರುದ್ಯೋಗಿಗಳಾ? ಹಿಂದಿನ ವರ್ಷಗಳಲ್ಲಿರುವವರು ನಿರುದ್ಯೋಗಿಗಳಲ್ವಾ? ನೀವು ನುಡಿದಂತೆ ನಡೆದಿಲ್ಲ ಅಂತ ಹೇಳಲ್ಲ, ಆದ್ರೆ ನುಡಿದಂತೆ ಸಂಪೂರ್ಣ ನಡೆದಿಲ್ಲ. ಕೊಟ್ಟ ಮಾತು ಸಂಪೂರ್ಣವಾಗಿ ಉಳಿಸಿಕೊಳ್ಳುವತ್ತ ಗಮನ ಕೊಡಿ ಎಂದು ಹೆಚ್​ಡಿ ಕುಮಾರಸ್ವಾಮಿ ಕಾಂಗ್ರೆಸ್​ಗೆ ಸಲಹೆ ನೀಡಿದರು.

ಇನ್ನು ಗ್ಯಾರಂಟಿ ಕಾರ್ಡ್‌ಗಳಿಗೆ ಸಹಿ ಹಾಕಿ‌ ಕೊಟ್ಟಿದೀರಿ. ಎಲ್ಲರಿಗೂ ಖಚಿತ, ಉಚಿತ, ನಿಶ್ಚಿತ ಅಂದಿರಿ. ಆದ್ರೆ ಮಂತ್ರಿಯೊಬ್ಬರು ದಾರಿಯಲ್ಲಿ ಹೋಗೋರಿಗೆಲ್ಲಾಕೊಡಲು ಆಗುತ್ತಾ ಅಂದ್ರು. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಅಂದಿದ್ದೀರಿ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವ ಎಲ್ಲಾ 5 ಗ್ಯಾರಂಟಿಗಳನ್ನು ಜಾರಿ ಮಾಡೇ ಮಾಡುತ್ತೇವೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, 3ನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆಗೆ ಅಧಿಕೃತವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದ್ದಾರೆ.

ಪಡಿತರಚೀಟಿದಾರರ ಅಕೌಂಟ್ ಗೆ ತಲಾ ಒಬ್ಬರಿಗೆ ಪ್ರತಿ ಕೆಜಿಗೆ 34 ರೂ.ನಂತೆ 170 ವರ್ಗಾವಣೆ ಮಾಡಲಾಯಿತು. ಕರ್ನಾಟಕ ರಾಜ್ಯದಲ್ಲಿ 1.28 ಕೋಟಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರು ಇದ್ದಾರೆ. ಇದರಲ್ಲಿ ಶೇ. 99 ರಷ್ಟು ಕಾರ್ಡುಗಳು ಆಧಾರ್ ಜೋಡಣೆ ಹೊಂದಿವೆ. ಶೇ. 82 ರಷ್ಟು ಪಡಿತರ ಚೀಟಿಗಳು ಅಂದರೆ 1.06 ಪಡಿತರ ಚೀಟಿಗಳು. ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಯಾಗಿವೆ. ಈ ಖಾತೆಗಳಿಗೆ ನಗದು ವರ್ಗಾವಣೆ ಮಾಡಲಾಗುವುದು. ಉಳಿದ ಕಾರ್ಡುದಾರರಿಗೆ ಖಾತೆ ತೆರೆಯಲು ಮಾಹಿತಿ ನೀಡಲಾಗುವುದು. 1.27 ಕೋಟಿ ಕಾರ್ಡುಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರೆಂದು ಗುರುತಿಸಲಾಗಿದ್ದು ಅವರ ಖಾತೆಗೆ ನಗದು ವರ್ಗಾಯಿಸಲಾಗುವುದು. ಶೇ. 94 ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರು ಹಾಗೂ ಶೇ. 5 ರಷ್ಟು ಪುರುಷರಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಗೆ ಅಂದಾಜು 800 ಕೋಟಿ ರೂ. ವೆಚ್ಚ ತಗುಲಲಿದೆ.