ರೋಗಿ ಇಲ್ಲದಿದ್ರೂ ಎಮರ್ಜೆನ್ಸಿ ಸೈರನ್ ಹಾಕಿ, ಜ್ಯೂಸ್​ ಅಂಗಡಿ ಮುಂದೆ ನಿಂತ ಆ್ಯಂಬುಲೆನ್ಸ್​ ಚಾಲಕ, ಪೊಲೀಸರಿಂದ ತರಾಟೆ

ಆ್ಯಂಬುಲೆನ್ಸ್​ ಚಾಲಕನೊಬ್ಬ ಉಪಾಹಾರಕ್ಕೆ ತೆರಳಲು ಸೈರನ್ ದುರ್ಬಳಕೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು,  ವಿಡಿಯೋ  ಎಲ್ಲೆಡೆ ವೈರಲ್ ಆಗಿದೆ. ಸೈರನ್ ಹಾಕಿಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್​ನ್ನು ನೋಡಿದ ಪೊಲೀಸರು ಎಮರ್ಜೆನ್ಸಿ ಎಂದು ಟ್ರಾಫಿಕ್ ಕ್ಲಿಯರ್ ಮಾಡಿಸಿದ್ದರು. ಆದರೆ ಆತ ಆಸ್ಪತ್ರೆಗೆ ಹೋಗುವ ಬದಲು ಹೋಟೆಲ್ ಬಳಿ ಗಾಡಿಯನ್ನು ನಿಲ್ಲಿಸಿದ್ದ.

ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಮಾತ್ರ ಚಾಲಕ ಎಮರ್ಜೆನ್ಸಿ ಸೈರನ್ ಹಾಕಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘನೆಯನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ಎಮರ್ಜೆನ್ಸಿ ಇರಲಿಲ್ಲ ಮತ್ತು ಆಂಬ್ಯುಲೆನ್ಸ್‌ನಲ್ಲಿ ರೋಗಿಯಿಲ್ಲ ಎಂದು ಅವರು ಹೇಳಿದರು. ವಾಹನದಲ್ಲಿ ಇಬ್ಬರು ನರ್ಸ್‌ಗಳು ಇದ್ದರು ಎಂಬುದು ತಿಳಿದುಬಂದಿದೆ.

ಆ್ಯಂಬುಲೆನ್ಸ್​ ಜನನಿಬಿಡ ಬಶೀರ್‌ಬಾಗ್ ಜಂಕ್ಷನ್ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಾಲಕನ ಸೈರಲ್ ಹಾಕುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಬೇರೆ ವಾಹನಗಳನ್ನು ತಡೆದು ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದರು. ಆದರೆ ಟ್ರಾಫಿಕ್ ಸಿಗ್ನಲ್​ನಿಂದ 100 ಮೀಟರ್ ದೂರ ಹೋಗುತ್ತಿದ್ದಂತೆ ಹೋಟೆಲ್ ಬಳಿ ಗಾಡಿ ನಿಲ್ಲಿಸಿದ್ದು ಕಂಡುಬಂತು, ನಂತರ ಪೊಲೀಸರು ಚಾಲಕನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ.

ಕಾಲಹರಣ ಮಾಡಲು ಸೈರಲ್ ದುರುಪಯೋಗ ಪಡಿಸಿಕೊಳ್ಳುತ್ತೀರಾ, ರೋಗಿ ಎಲ್ಲಿ, ತಿಂಡಿ ತಿನ್ನಲು ಆ್ಯಂಬುಲೆನ್ಸ್​ ಸೈರಲ್ ದುರ್ಬಳಕೆ ಮಾಡಿಕೊಂಡಿದ್ದೀರಾ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ಕುರಿತು ಆಸ್ಪತ್ರೆಗೆ ಸೂಚನೆ ನೀಡುತ್ತೇವೆ, ಮತ್ತೆ ಇದೇ ರೀತಿಯ ಗಂಭೀರ ಆರೋಪಗಳು ಕೇಳಿಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಡಿಜಿಪಿ ಅಂಜನಿ ಕುಮಾರ್ ತಿಳಿಸಿದ್ದಾರೆ.