ಪಂಜಾಬ್​​ನಲ್ಲಿ ಪ್ರವಾಹಕ್ಕೆ ಸಿಲುಕಿ ಬಸ್ ಪಲ್ಟಿ; ಕ್ರೇನ್ ಬಳಸಿ 27 ಜನರ ರಕ್ಷಣೆ

ದೆಹಲಿ: ಪಂಜಾಬ್‌ನಲ್ಲಿ ಪ್ರವಾಹಕ್ಕೆ ಸಿಲುಕಿ ಬಸ್ ಮಗುಚಿದೆ. ಪಂಜಾಬ್‌ನ ಅಂಬಾಲಾ-ಯಮುನಾನಗರ ರಸ್ತೆಯಲ್ಲಿ ಮಗುಚಿಬಿದ್ದ ಬಸ್ ನಿಂದ ಪ್ರಯಾಣಿಕರನ್ನು ಕ್ರೇನ್ ಸಹಾಯದಿಂದ ರಕ್ಷಿಸಲಾಗಿದೆ. 27 ಪ್ರಯಾಣಿಕರು ಬಸ್ಸಿನಲ್ಲಿದ್ದರು ಎಂದು ಎನ್​​ಡಿಟಿವಿ ವರದಿ ಮಾಡಿದೆ. ಕಳೆದ ಮೂರು ದಿನಗಳಿಂದ ಉತ್ತರ ಭಾರತದಲ್ಲಿ ಭಾರೀ ಮಳೆ ಯಾಗುತ್ತಿದ್ದು , ಭೂಕುಸಿತದಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿದೆ.ಪಂಜಾಬ್ ಈಗಾಗಲೇ ಈ ತಿಂಗಳು ಶೇ70 ರಷ್ಟು ಮಳೆಯನ್ನು ಕೇವಲ ಎರಡು ದಿನಗಳಲ್ಲಿ ಪಡೆದಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ನೀರು ತುಂಬಿದ್ದು, ಅಲ್ಲಿನ ನಿವಾಸಿಗಳನ್ನು ದೋಣಿಗಳಲ್ಲಿ ರಕ್ಷಿಸಲಾಗಿದೆ. ಜನರು ಕುತ್ತಿಗೆಯವರೆಗೆ ನೀರು ಬಂದಿದ್ದು ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಕಳೆದ 50 ಗಂಟೆಗಳಲ್ಲಿ ಚಂಡೀಗಢ, ಮೊಹಾಲಿ ತಮ್ಮ ವಾರ್ಷಿಕ ಮಳೆಯ ಕೋಟಾದ 50 ಪ್ರತಿಶತವನ್ನು ದಾಖಲಿಸಿವೆ.

ನಗರ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.

ಪಟಿಯಾಲ, ರೋಚಾರ್ ಮತ್ತು ಮೊಹಾಲಿ ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲು ಕೇಂದ್ರ ಮತ್ತು ರಾಜ್ಯ ರಕ್ಷಣಾ ತಂಡಗಳು ಮತ್ತು ಭಾರತೀಯ ಸೇನೆಯ ಪಡೆಗಳನ್ನು ಕರೆತರಲಾಗಿದೆ. ಸಟ್ಲೆಜ್, ಬಿಯಾಸ್ ಘಗ್ಗರ್ ನದಿಗಳಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚು ನೀರು ಹರಿದಿದೆ.

ಸುಮಾರು ಒಂದು ದಶಕದಲ್ಲಿ ರಾಜ್ಯದ ಭೀಕರ ಪ್ರವಾಹ ಪರಿಸ್ಥಿತಿಯನ್ನು ಪಂಜಾಬ್ ಎದುರಿಸುತ್ತಿರುವ ಕಾರಣ, ಗೃಹ ಸಚಿವ ಅಮಿತ್ ಶಾ ನಿನ್ನೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಮಾತನಾಡಿದ್ದಾರೆ. ಅವರು ಪ್ರವಾಹ ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಅಗತ್ಯವಿದ್ದಲ್ಲಿ ನಾವು ಅವರನ್ನು ಸಂಪರ್ಕಿಸುತ್ತೇವೆ ಎಂದು ನಾವು ವಿವರಿಸಿದ್ದೇವೆ ಎಂದು ಮಾನ್ ಹೇಳಿದ್ದಾರೆ.