Bengal Panchayat Polls: ಕಾಂಗ್ರೆಸ್​, ಟಿಎಂಸಿ ಕಾರ್ಯಕರ್ತರ ನಡುವೆ ಜಟಾಪಟಿ, ಓರ್ವನಿಗೆ ಗಾಯ

ಕಾಂಗ್ರೆಸ್ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ ನಡೆದಿದೆ. ಜುಲೈ 8ಕ್ಕೆ ಪಶ್ಚಿಮ ಬಂಗಾಳದಲ್ಲಿ  ಪಂಚಾಯತಿ ಚುನಾವಣೆ  ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ನಿತ್ಯ ಗಲಭೆಗಳು ಸಾಮಾನ್ಯವಾಗಿವೆ. ಮುರ್ಷಿದಾಬಾದ್ ಜಿಲ್ಲೆಯ ಸುತಿ ಬೌರಿಪುನಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಗಾಯಗೊಂಡಿದ್ದಾರೆ. ವಿಡಿಯೋದಲ್ಲಿ ಪಕ್ಷದ ಕಾರ್ಯಕರ್ತರು ದೊಣ್ಣೆ ಮತ್ತು ರಾಡ್‌ಗಳಿಂದ ಪರಸ್ಪರ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು.

ಕಾಂಗ್ರೆಸ್ ಪಕ್ಷವು ನಮ್ಮ ಕಾರ್ಯಕರ್ತನ ಶಿರಚ್ಛೇದ ಮಾಡಿದೆ ಎಂದು ಟಿಎಂಸಿ ಆರೋಪಿಸಿದ್ದರಿಂದ ಗಲಭೆ ಆರಂಭವಾಗಿದೆ, ಈ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ತಳ್ಳಿಹಾಕಿದೆ.

ರಾಜ್ಯದಲ್ಲಿ ನಡೆಯಲಿರುವ ಮಹತ್ವದ ಪಂಚಾಯತಿ ಚುನಾವಣೆಯ ಸಂದರ್ಭದಲ್ಲಿ ಉಭಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ.

ಜುಲೈ 8 ರಂದು ರಾಜ್ಯದಲ್ಲಿ ನಡೆಯಲಿರುವ ಬಂಗಾಳ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಮಯದಿಂದಲೇ ಗಲಾಟೆಗಳು ಹೆಚ್ಚಾಗಿವೆ. ಜುಲೈ 11 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಸಂಬಂಧಿತ ಘರ್ಷಣೆಗಳು ಮತ್ತು ದಾಳಿಗಳಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.