ಬೆಂಗಳೂರಿನ ಜಾಲಹಳ್ಳಿ ಕ್ರಾಸ್​​ನಲ್ಲಿ ಬಸ್, ಸ್ಕೂಟರ್ ಅಪಘಾತ; ಪಿಯು ವಿದ್ಯಾರ್ಥಿನಿ ಸಾವು

ಬೆಂಗಳೂರು: ಟ್ಯೂಷನ್‌ಗೆಂದು ತಂದೆಯೊಂದಿಗೆ ಸ್ಕೂಟರ್​​ನಲ್ಲಿ ತೆರಳುತ್ತಿದ್ದಾಗ ಬಸ್ ಡಿಕ್ಕಿಯಾಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದಿಶಾ (18) ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ  ನಡೆದಿದೆ. ಮಲ್ಲೇಶ್ವರದಲ್ಲಿರುವ ಟ್ಯೂಷನ್​ ಸೆಂಟರ್​ಗೆ ತೆರಳುವಾಗ ಜಾಲಹಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತವು ಬೆಳಿಗ್ಗೆ 6 ರಿಂದ 6.30 ರ ನಡುವೆ ಸಂಭವಿಸಿದೆ ಎನ್ನಲಾಗಿದೆ.

ಖಾಸಗಿ ಬಸ್ ಯಶವಂತಪುರ ಕಡೆಗೆ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ವಿಜಯ್ ಹೇಳಿದ್ದಾರೆ. ಮೋಟಾರ್ ಸೈಕಲ್‌ನಲ್ಲಿದ್ದ ಇಬ್ಬರು ಅದೇ ಮಾರ್ಗದಲ್ಲಿದ್ದರು ಆದರೆ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದರು. ಬಸ್ಸು ಮುಖ್ಯರಸ್ತೆಯಲ್ಲಿತ್ತು. ಸಿಗ್ನಲ್ ತೆರವಾದಾಗ ಬಸ್ ಚಾಲಕ ಏಕಾಏಕಿ ಸರ್ವಿಸ್ ರಸ್ತೆಗೆ ಪಲ್ಟಿ ಹೊಡೆದಿದ್ದು, ನಂತರ ಮೋಟಾರ್ ಸೈಕಲ್ ಬಸ್​​ಗೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ಅಚಾತುರ್ಯದಿಂದಲೇ ಘಟನೆ ನಡೆದಿದೆ ಎಂದು ಮೂಲಗಳು ಹೇಳಿವೆ.”

ದಿಶಾ ಅವರ ತಂದೆ ಸತೀಶ್ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದು, ಅವರು ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿದ್ದರು ಎಂದು ಮತ್ತೊಬ್ಬರು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಸ್ಕೂಟರ್ ವಿದ್ಯಾರ್ಥಿನಿಯ ಮೇಲೆ ಬಿದ್ದಿತು. ಆಕೆಯ ಕಾಲಿಗೆ ದೊಡ್ಡ ಗಾಯವಾಗಿತ್ತು. ಮೂಳೆ ಕಾಣಿಸುತ್ತಿತ್ತು. ತಕ್ಷಣ ಸಂಜೀವಿನಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದೆ ಎಂದು ಆಟೋರಿಕ್ಷಾ ಚಾಲಕ ಚರಣ್ ಹೇಳಿದ್ದಾರೆ.

ಆಕೆಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಸಿಬ್ಬಂದಿ ಹೇಳಿದರು. ಅಷ್ಟರಲ್ಲಿ ಆಕೆ ಇನ್ನೂ ಉಸಿರಾಡುತ್ತಿದ್ದಳು. ನಂತರ ಆಂಬುಲೆನ್ಸ್‌ನಲ್ಲಿ ಗೊರಗುಂಟೆಪಾಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ನಾವು ಪ್ರಯಾಣಿಕರನ್ನು ಖಾಸಗಿ ಬಸ್‌ನಿಂದ ಕೆಳಗಿಳಿಸಿ ಅದನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದಿಶಾ ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು ಎಂದು ಆಕೆಯ ತಾಯಿ ಮನೋರಂಜಿತಾ ಹೇಳಿದ್ದಾರೆ. ನಾವು ಅವಳ ಮಹತ್ವಾಕಾಂಕ್ಷೆಗಳನ್ನು ತುಂಬಾ ಕಷ್ಟದಿಂದ ಬೆಂಬಲಿಸುತ್ತಿದ್ದೆವು. ಅವಳ ತಂದೆ ಪ್ರತಿದಿನ ಬೆಳಿಗ್ಗೆ ಅವಳನ್ನು ಟ್ಯೂಷನ್ ಕೇಂದ್ರಕ್ಕೆ ಬಿಡುತ್ತಿದ್ದರು. ಟ್ಯೂಷನ್ ಮುಗಿಸಿ ಸಂಜೆ ತಡವಾಗಿ ಹಿಂತಿರುಗುತ್ತಿದ್ದಳು ಎಂದು ಅವರು ಹೇಳಿದ್ದಾರೆ.