ಅಯ್ಯೋ ಪಾಪಿ: ಮಗಳ ಮದುವೆಯ ದಿನವೇ ತಂದೆಯನ್ನು ಕೊಂದ ಮಾಜಿ ಪ್ರೇಮಿ

ತಿರುವನಂತಪುರಂ (ಜೂನ್‌ 28, 2023): ಕೇರಳ ರಾಜಧಾನಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ತನ್ನ ಮಗಳ ಮದುವೆಯ ದಿನದಂದು 63 ವರ್ಷದ ವ್ಯಕ್ತಿಯೊಬ್ಬನನ್ನು ಕತ್ತು ಕೊಯ್ದು ಕೊಂದಿರುವ ಭೀಕರ ಘಟನೆ ನಡೆದಿದೆ. ವರ್ಕಳದ ವಡಸ್ಸೆರಿಕೋಣಂ ಮೂಲದ ರಾಜು (63) ಅವರನ್ನು ಅವರ ಮನೆಯಲ್ಲೇ ನೆರೆಮನೆಯ ಜಿಷ್ಣು ಮತ್ತು ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ. ರಾಜು ಅವರ ಪುತ್ರಿ ಶ್ರೀ ಲಕ್ಷ್ಮೀ ಮತ್ತು ಆರೋಪಿ ಜಿಷ್ಣುವಿಗೆ ಈ ಹಿಂದೆ ಸಂಬಂಧವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮದುವೆ ಮೈತ್ರಿಯೊಂದಿಗೆ ಮುಂದುವರಿಯುವ ಮೊದಲು ಕುಟುಂಬವು ಈಗಾಗಲೇ ಜಿಷ್ಣುವಿನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿತ್ತು ಎಂದು ತಿಳಿದುಬಂದಿದೆ.

ರಾಜು ಅವರ ಮಗಳ ಮದುವೆ ಬುಧವಾರ ಬೆಳಗ್ಗೆ 10.30ಕ್ಕೆ ನಿಗದಿಯಾಗಿತ್ತು. ಮದುವೆಯ ಮುನ್ನಾದಿನ, ಕುಟುಂಬವು ಸ್ನೇಹಿತರು ಮತ್ತು ಕುಟುಂಬಕ್ಕೆ ಭೋಜನವನ್ನು ಆಯೋಜಿಸಿತ್ತು. ಅತಿಥಿಗಳು ನಿವಾಸದಿಂದ ಹೊರಬಂದ ನಂತರ, ಜಿಷ್ಣು, ಅವರ ಸಹೋದರ ಮತ್ತು ಇಬ್ಬರು ಸ್ನೇಹಿರಾದ ಮನು ಮತ್ತು ಶ್ಯಾಮ್ ಎಂಬುವರು ಮಧ್ಯರಾತ್ರಿಯ ಸಮಯದಲ್ಲಿ ಕುಟುಂಬದೊಂದಿಗೆ ಜಗಳವಾಡಿದರು.

ಈ ವೇಳೆ ಗಲಾಟೆ ನಡೆಯುತ್ತಿದ್ದಾಗ ಆರೋಪಿಗಳಲ್ಲೊಬ್ಬ ಮದುವೆ ಹುಡುಗಿಯ ತಂದೆ ರಾಜು ಅವರಿಗೆ ಮಚ್ಚಿನಿಂದ ಕೊಚ್ಚಿ, ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಈ ಗಲಾಟೆ ಕೇಳಿ ರಾಜು ಅವರ ಸಹೋದರ ಮತ್ತು ಕುಟುಂಬ ನಿವಾಸಕ್ಕೆ ಬರುವಷ್ಟರಲ್ಲಿ ನಾಲ್ವರು ಮನೆಯಿಂದ ಎಸ್ಕೇಪ್‌ ಆಗಿದ್ದರು ಎಂದು ತಿಳಿದುಬಂದಿದೆ. ಆದರೂ, ಸ್ಥಳೀಯರ ನೆರವಿನಿಂದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದೇಶದಲ್ಲಿದ್ದ ರಾಜು  25 ವರ್ಷಗಳ ನಂತರ ಅಲ್ಲಿ ತನ್ನ ಕೆಲಸವನ್ನು ತೊರೆದು ಕೇರಳದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸಲು ಹಿಂದಿರುಗಿದ್ದರು. ಕೇರಳದಲ್ಲಿ ಅವರು ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದೂ ತಿಳಿದುಬಂದಿದೆ. 

ಇನ್ನು, ಈ ಕೃತ್ಯದ ಬಗ್ಗೆ ಕಲ್ಲಂಬಳಂ ಪೊಲೀಸರು ಮಾಹಿತಿ ನೀಡಿದ್ದು, ಅಪರಾಧವು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ನಮಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂದ ತಕ್ಷಣ ಪೊಲೀಸರು ತನಿಖೆ ಆರಂಭಿಸಿದರು. ನಾಲ್ವರೂ ಸ್ಥಳದಿಂದ ಪರಾರಿಯಾದರೂ,  ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಪುತ್ರಿಯರ ವಿವಾಹ ಕಣ್ಣುಂಬಿಕೊಳ್ಳಬೇಕಿದ್ದ ತಂದೆ ಮದುವೆಯ ಮುನ್ನಾ ದಿನ ಸಾವು
ಹೌದು, ನಂಬೋಕೆ ಕಷ್ಟವಾದರೂ ಇದು ನಿಜ. ಶಿವಮೊಗ್ಗದ ಸಾಗರ ತಾಲೂಕಿನ ಆಚಾಪುರ ಗ್ರಾಪಂ ವ್ಯಾಪ್ತಿಯ ಚನ್ನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 58 ವರ್ಷದ ಮಂಜುನಾಥ ಗೌಡ ಮೃತಪಟ್ಟಿದ್ದಾರೆ. ಇಬ್ಬರು ಪುತ್ರಿಯರ ವಿವಾಹ ಕಣ್ಣುಂಬಿ ಕೊಂಡು ಸಂತಸ ಪಡಬೇಕಿದ್ದ ತಂದೆ ಮದುವೆಯ ಮುನ್ನಾ ದಿನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮಂಜುನಾಥ ಗೌಡ ಮೂಲತಃ ಬನವಾಸಿಯವರು. ತಮ್ಮ ಇಬ್ಬರು ಹೆಣ್ಣುಮಕ್ಕಳ ಮದುವೆ ನೆರವೇರಿಸಲು ಕುಟುಂಬ ಸಹಿತ ಚನ್ನಕೊಪ್ಪ ಗ್ರಾಮದ ತಮ್ಮ ಮಾವನ ಮನೆ ರುದ್ರಪ್ಪ ಗೌಡರ ಮನೆಗೆ ಬಂದಿದ್ದರು. ಇಂದು ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದ ಸಭಾಭವನದಲ್ಲಿ ಇಬ್ಬರು ಪುತ್ರಿಯರ ಮದುವೆ ಸಿದ್ಧತೆ ನಡೆಸಿದ್ದರು. ಮದುವೆ ಕಾರ್ಯಕ್ಕೆ ಅಗತ್ಯ ಸಾಮಗ್ರಿ ಖರೀದಿಸಲು ಆನಂದಪುರಕ್ಕೆ  ಮನೆಯಿಂದ ಹೊರಟಿದ್ದರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದು ಬಸ್‌ ನಿಲ್ದಾಣದ  ಕಡೆಗೆ ಸಾಗುತ್ತಿದ್ದಾಗ ನಡೆದಿದ್ದು, ಮಂಜುನಾಥ ಗೌಡ ಮೃತಪಟ್ಟಿದ್ದಾರೆ.