ಹೀನಾಯ ಸ್ಥಿತಿ ತಲುಪಿದ ‘ಆದಿಪುರುಷ್’ ಕಲೆಕ್ಷನ್; ಸಿನಿಮಾ ಕಿತ್ತೊಗೆಯುತ್ತಿದ್ದಾರೆ ಚಿತ್ರಮಂದಿರದ ಮಾಲೀಕರು

‘ಆದಿಪುರುಷ್’ ಸಿನಿಮಾದ (Adipurush Movie) ಕಲೆಕ್ಷನ್ ದಿನೇ ದಿನೇ ತಗ್ಗುತ್ತಿದೆ. ಸಿನಿಮಾ ಕ್ಷೇತ್ರದವರಿಗೆ ಶುಕ್ರವಾರ ವಿಶೇಷ ದಿನ. ಆ ದಿನವೂ‘ಆದಿಪುರುಷ್’ ‘ಸಿನಿಮಾ ಗಳಿಕೆ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. 150 ರೂಪಾಯಿ ಟಿಕೆಟ್ ಆಫರ್​​ ಕೂಡ ಕೆಲಸ ಮಾಡಿಲ್ಲ. ಮತ್ತೊಂದು ಕಡೆ ಚಿತ್ರಮಂದಿರದಿಂದ ‘ಆದಿಪುರುಷ್’ ಶೋನ ಕಡಿತ ಮಾಡುವ ಕೆಲಸ ಆಗುತ್ತಿದೆ. ಅನೇಕ ಕಡೆಗಳಲ್ಲಿ ಶೋನ ಕಿತ್ತೆಸೆಯಲಾಗಿದೆ. ಹೀಗಾಗಿ, ವೀಕೆಂಡ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರತಂಡಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ.

‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡಿದ್ದಾರೆ. ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವತ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿ ಇವರಿದ್ದರು. ಆದರೆ, ರಾಮಾಯಣವನ್ನು ಅಣಕಿಸಿದ ರೀತಿಯಲ್ಲಿ ‘ಆದಿಪುರುಷ್’ ಚಿತ್ರ ಇದೆ ಎಂದು ಅನೇಕರು ಆರೋಪಿಸಿದ್ದಾರೆ. ಈ ಕಾರಣಕ್ಕೆ ಸಿನಿಮಾಗೆ ಹಿನ್ನಡೆ ಉಂಟಾಗಿದೆ.

‘ಆದಿಪುರುಷ್’ ಚಿತ್ರವನ್ನು ಟೀಕಿಸಲು ಭರಪೂರ ವಿಚಾರಗಳು ಸಿಗುತ್ತಿವೆ. ಸೈಫ್ ಅಲಿ ಖಾನ್ ಮಾಡಿರುವ ರಾವಣನ ಪಾತ್ರದಿಂದ ಹಿಡಿದು, ಚಿತ್ರದ ಸಂಭಾಷಣೆವರೆಗೆ ಅನೇಕ ರೀತಿಯ ಟೀಕೆಗಳು ವ್ಯಕ್ತವಾಗಿದೆ. ರಾಮನ ಪಾತ್ರಕ್ಕೆ ಪ್ರಭಾಸ್ ಹೊಂದುತ್ತಿಲ್ಲ ಎಂಬುದು ಕೆಲವರ ಅಭಿಪ್ರಾಯ. ಸಿನಿಮಾ ರಿಲೀಸ್​ಗೂ ಮೊದಲು ಇದು ಸಂಪೂರ್ಣವಾಗಿ ರಾಮಾಯಣ ಆಧರಿತ ಚಿತ್ರ ಎನ್ನುತ್ತಿದ್ದ ತಂಡದವರು, ಸಿನಿಮಾ ರಿಲೀಸ್ ಆದ ಬಳಿಕ ‘ನಾವು ರಾಮಾಯಣವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ ಅಷ್ಟೇ’ ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಚಿತ್ರತಂಡಕ್ಕೆ ಹಿನ್ನಡೆ ಆಯಿತು.

ದೇಶದ ಹಲವು ಕಡೆಗಳಲ್ಲಿ ‘ಆದಿಪುರುಷ್’ ಸಿನಿಮಾ ಶೋ ಕಡಿಮೆ ಮಾಡಲಾಗುತ್ತಿದೆ. ಸೋಮವಾರ (ಜೂನ್ 19) 10+ ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಈ ಚಿತ್ರ ಶುಕ್ರವಾರ (ಜೂನ್​ 23) ಕೇವಲ 3 ಕೋಟಿ ರೂಪಾಯಿ ಬಾಚಿಕೊಂಡಿದೆ. ಇಂದು (ಜೂನ್ 24) ಹಾಗೂ ನಾಳೆ (ಜೂನ್ 25) ಸಿನಿಮಾದ ಗಳಿಕೆ ಎಷ್ಟಾಗಲಿದೆ ಎಂಬ ಕುತೂಹಲ ಮೂಡಿದೆ.