ಆಂಟಿಯ ಹಿಂದೆ ಬಿದ್ದಿದ್ದ ಆಟೋ ಡ್ರೈವರ್​ನ ಬರ್ಬರ ಹತ್ಯೆ; ಆರೋಪಿ ಅರೆಸ್ಟ್​

ಶಿವಮೊಗ್ಗ: ನಗರದ ಇಲಿಯಾಸ್ ನಗರದ 100 ಅಡಿ ರಸ್ತೆಯಲ್ಲಿ ಜೂ.14ರ ರಾತ್ರಿ ಆಸೀಫ್ ಎನ್ನುವ 25 ವರ್ಷದ ಯುವಕನ ಕೊಲೆ ಆಗಿತ್ತು. ಇದೀಗ ಕೊಲೆ ಮಾಡಿದ ಆರೋಪಿ ಜಬೀ ಎಂಬಾತ ಸಿಕ್ಕಿದ್ದಾನೆ. ಇನ್ನು ಮೃತ ಆಸೀಫ್​ ಶಿವಮೊಗ್ಗದ ಟಿಪ್ಪು ನಗರದ ವಾಸಿಯಾಗಿದ್ದು, ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆಟೋ ಡ್ರೈವರ್ ಕೆಲಸ ಬಿಟ್ಟು ಪೇಟಿಂಗ್ ಕೆಲಸಕ್ಕೆ ಮುಂದಾಗಿದ್ದನು. ಶಿವಮೊಗ್ಗನಗರದ ಇಲಿಯಾಜ್ ನಗರದ ವಾಸಿ ಆಗಿರುವ ಆರೋಪಿ ಜಬೀ, ತನ್ನ ಅಂಟಿ ಮಗುವನ್ನು ಮನೆಯಿಂದ ಶಾಲೆಗೆ ಪಿಕ್ ಮತ್ತು ಡ್ರಾಪ್​ಗೆಂದು ಆಸೀಫ್​ನನ್ನು ಆಟೋ ಡ್ರೈವರ್​ಗೆ ನೇಮಕ ಮಾಡಿದ್ದರು. ಮಗುವನ್ನು ಬೆಳಿಗ್ಗೆ ಶಾಲೆಗೆ ಹಾಗೂ ಸಂಜೆ ಮನೆಗೆ ಕರೆದುಕೊಂಡು ಹೋಗಿ ಬರುವುದು ಮಾಡುತ್ತಿದ್ದ. ಈ ವೇಳೆ ಆಸೀಫ್ ಕಣ್ಣು ಆ ಮನೆಯಲ್ಲಿರುವ ಮಹಿಳೆಯ ಮೇಲೆ ಬಿದ್ದಿತ್ತು. ಇದೇ ಇತನ ಸಾವಿಗೆ ಕಾರಣವಾಗಿದೆ.

ಹೌದು ಮಹಿಳೆಯ ನಂಬರ್ ಪಡೆದುಕೊಂಡ ಆಸೀಫ್ ಮೊಬೈಲ್ ಕಾಲ್ ಮತ್ತು ಚಾಟಿಂಗ್ ಶುರು ಮಾಡಿದ್ದನು. ಈ ಕುರಿತು ಕುಟುಂಬಸ್ಥರಿಗೆ ಮಹಿಳೆಯು ಮಾಹಿತಿ ಕೊಟ್ಟಿದ್ದಳು. ಇದರಿಂದ ಕೋಪಗೊಂಡ ಅಂಟಿ ಕುಟಂಬಸ್ಥರು ಆಸೀಫ್ ಗೆ, ನಮ್ಮ ತಂಟೆಗೆ ಬರದಂತೆ ಖಡಕ್ ವಾರ್ನಿಂಗ್ ಮಾಡಿದ್ದರು. ಆದ್ರೆ, ಆಸೀಫ್ ಮಾತ್ರ ತನ್ನ ಬುದ್ದಿ ಬದಲಿಸಲಿಲ್ಲ. ಮತ್ತೆ ಮಹಿಳೆಯ ಜೊತೆ ಕಾಲಿಂಗ್​, ಚಾಟಿಂಗ್ ಶುರು ಹಚ್ಚಿಕೊಂಡಿದ್ದನು. ಈ ವಿಚಾರ ಜಬೀ ಗಮನಕ್ಕೆ ಬಂದಿತ್ತು. ಈ ಹಿನ್ನಲೆಯಲ್ಲಿ ಜೂ.14 ರ ರಾತ್ರಿ ಜಬೀ ಅಂಟಿಗೆ ತೊಂದರೆಕೊಡುತ್ತಿದ್ದ ಅಟೋ ಡ್ರೈವರ್ ಆಸೀಫ್ ನನ್ನು ಜಬೀ ಮತ್ತು ಆತನ ಸಹಚರರು ಸೇರಿಕೊಂಡು ಚಾಕುವಿನಿಂದ ಇರಿದು ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದರು.

ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿತ್ತು. ಕೊಲೆಯಾದ ಅಸೀಫ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸುತ್ತಾರೆ. ಕೇವಲ ಒಂದು ಮಹಿಳೆಯ ವಿಚಾರಕ್ಕಾಗಿ ಜಬೀ ಒಂದು ಕೊಲೆಗೆ ಮುಂದಾಗಿದ್ದು ಮಾತ್ರ ನಗರದ ಎಲ್ಲರಿಗೂ ಆತಂಕ ಮೂಡಿಸಿದೆ. ಸದ್ಯ ದೊಡ್ಡಪೇಟೆ ಪೊಲೀಸರು ಪ್ರಮುಖ ಆರೋಪಿ ಜಬೀಯನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಮತ್ತೆ ಸಾರ್ವಜನಿಕ ವಲಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇನ್ನು ಕೇವಲ 25 ವಯಸ್ಸಿನ ಮಗನನ್ನು ಕಳೆದುಕೊಂಡ ಮೃತನ ಕುಟುಂಬಸ್ಥರಿಗೆ ಈಗ ದಿಕ್ಕೆ ತೋಚದಂತಾಗಿದೆ.