ಅನ್ನಭಾಗ್ಯ ಯೋಜನೆ ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ ಹೋದ ಸರ್ಕಾರ; ತೆಲಂಗಾಣ ಸಿಎಂಗೆ ಸಿದ್ದರಾಮಯ್ಯ ಕರೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಯೋಜನೆ ಇದೇ ಜುಲೈ 1 ರಂದು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹೀಗಾಗಿ ಜುಲೈ 1ರಂದು ಈ ಯೋಜನೆ ಜಾರಿಯಾಗುವುದು ಬಹುತೇಕ ಡೌಟ್ ಆಗಿದ್ದು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅಕ್ಕ ಪಕ್ಕದ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಜೊತೆ ಅಕ್ಕಿ ಖರೀದಿಗೆ ಮಾತುಕತೆ ನಡೆಸಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ತೆಲಂಗಾಣದ ಸಿಎಂಗೆ ಕರೆ ಮಾಡಿ ಅಕ್ಕಿ ಪೂರೈಕೆಗೆ ಮನವಿ ಮಾಡಿದ್ದಾರೆ.

ಅನ್ನಭಾಗ್ಯ ಜಾರಿಗೆ ಎದುರಾಗಿರುವ ಅಕ್ಕಿ ಸಮಸ್ಯೆ ನಿವಾರಿಸಲು ರಾಜ್ಯ ಆಹಾರ ಇಲಾಖೆ ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಘಡ್, ಮಧ್ಯಪ್ರದೇಶ ರಾಜ್ಯಗಳನ್ನ ಸಂಪರ್ಕ ಮಾಡಿದೆ. ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ದೂರವಾಣಿ ಮೂಲಕ ಅಕ್ಕಿಯ ದರ ಹಾಗೂ ಎಕ್ಸಸ್, ಟ್ರಾನ್ಸ್ ಪೋರ್ಟ್ ಚಾರ್ಜ್ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಅಕ್ಕಿ ಲಭ್ಯತೆಯ ಬಗ್ಗೆ ಆಹಾರ ಇಲಾಖೆ ಸರ್ಕಾರಕ್ಕೆ ಪ್ರಾಥಮಿಕ ಮಾಹಿತಿ ನೀಡಿದೆ. ರಾಜ್ಯದ ಜನತೆಗೆ ಪ್ರತಿ ತಿಂಗಳಿಗೆ ಉಚಿತ ಅಕ್ಕಿ ವಿತರಿಸಲು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ. ಸದ್ಯ ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆ ಸವಾಲಾಗಿದೆ.

ಸಿಎಂ ಸಿದ್ದರಾಮಯ್ಯ ತೆಲಂಗಾಣ ಸಿಎಂಗೆ ಕರೆ ಮಾಡಿ ಅಕ್ಕಿ ಪೂರೈಕೆಗೆ ಮನವಿ ಮಾಡಿದ್ದಾರೆ. ಬಗ್ಗೆ ಸ್ವತಂ ತೆಲಂಗಾಣ ಸಿಎಂ ಮಾಹಿತಿ ನೀಡಿದ್ದಾರೆ. ರೈತರ ಜೊತೆಗೆ ದೇಶ ನಡೆಯಲೇಬೇಕು. ರೈತರು ಬಯಸಿದ್ರೆ ನಮ್ಮನ್ನ ಅಸಹಾಯಕರಾಗಿಯೂ ಮಾಡಬಹುದು. ಆದ್ರೆ, ರೈತರ ಅಸಹಾಯಕತೆಯ ಲಾಭ ಪಡೆದು, ದಲ್ಲಾಳಿಗಳ ಪರ ನಿಂತು, ದೇಶ ಹಾಳು ಮಾಡುವುದು ಯಾವುದೇ ರೀತಿಯಲ್ಲೂ ಸಮಂಜಸವಲ್ಲ. ನಿನ್ನೆಯಷ್ಟೇ ನನ್ನ ಜೊತೆಗೆ ಕರ್ನಾಟಕದಲ್ಲಿ ನೂತನವಾಗಿ ಆಯ್ಕೆಯಾದ ಮುಖ್ಯಮಂತ್ರಿಗಳ ಫೋನ್‌ ಬಂದಿತ್ತು. ಚಂದ್ರಶೇಖರ್‌ ರಾವ್‌ಜೀ ನಮಗೆ 27 ಲಕ್ಷ ಟನ್‌ ಅಕ್ಕಿ ಬೇಕಾಗಿದೆ. ನಿಮ್ಮ ಬಳಿ ಇದ್ರೆ ದರ ಹೇಳಿ ನಾವು ಖರೀದಿಸುತ್ತೇವೆ ಎಂದ್ರು ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಅವರು ನಾಗ್ಪುರದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.