ಬಿ.ಎಚ್ ರೋಡ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಕಾರವಾರ: ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೬೯ ಲಘು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಆಗಿದ್ದರಿಂದ ಸಾರ್ವಜನಿಕರ ಹಿತದೃಷ್ಟಿ ಗಮನದಲ್ಲಿರಿಸಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಇದೀಗ ಹೆದ್ದಾರಿಯಲ್ಲಿ ತಾತ್ಕಾಲಿಕ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದ್ದು ಲಘು ವಾಹನ ಸಂಚಾರಕ್ಕೆ ತೆರೆಯಲಾಗಿದೆ.

ಇನ್ನು ಈ ರಸ್ತೆಯಲ್ಲಿ ಸಂಚರಿಸುವ ಭಾರೀ ವಾಹನಗಳು ಕುಮಟಾ-ಶಿರಸಿ ಮಾರ್ಗವಾಗಿ ಮುಂದಿನ ಆದೇಶದವರೆಗೆ ಸಂಚರಿಸುವಂತೆ ತಿಳಿಸಲಾಗಿದೆ. ಕುಮಟಾ-ಬಡಾಳ ಘಾಟ್-ದೊಡ್ಮನೆ-ಸಿದ್ದಾಪುರ ಮಾರ್ಗವಾಗಿ ಈಗಾಗಲೇ ಚಲಿಸುವ ಬಸ್ಸುಗಳು ಎಂದಿನಂತೆ ಇದೇ ಮಾರ್ಗವಾಗಿ ಚಲಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ತಿಳಿಸಿದ್ದಾರೆ.