ಒಡಿಶಾ ದುರಂತ – AI ತಂತ್ರಜ್ಞಾನ ಬಳಸಿ ಛಿದ್ರಗೊಂಡ ಮೃತದೇಹಗಳನ್ನು ರೈಲ್ವೇ ಪತ್ತೆ ಹಚ್ಚಿದ್ದು ಹೇಗೆ?

ನವದೆಹಲಿ: ಯಾವುದೇ ದುರಂತ ನಡೆದಾಗ ಮೃತಪಟ್ಟವರ ಗುರುತನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅಂತಹದರಲ್ಲಿ ಒಡಿಶಾ ದುರಂತದಲ್ಲಿ (Odisha Train Crash) ಮೃತಪಟ್ಟ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ರೈಲ್ವೇ ಭಾರೀ ಸಾಹಸ ಮಾಡಿದೆ. ಕೇಂದ್ರದ ವಿವಿಧ ಸಂಸ್ಥೆಗಳ ನೆರವಿನಿಂದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (Artificial intelligence) ತಂತ್ರಜ್ಞಾನದ ಸಹಾಯ ಪಡೆದು ರೈಲ್ವೇ ಸಚಿವಾಲಯ ಮೃತರ ದೇಹಗಳನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.

ಒಡಿಶಾ ರೈಲು ದುರಂತದಲ್ಲಿ ಒಟ್ಟು 275 ಮಂದಿ ಮೃತಪಟ್ಟಿದ್ದರು. ಈ ಪೈಕಿ ಕೆಲವರ ದೇಹ ಗುರುತು ಸಿಗದಷ್ಟು ಛಿದ್ರವಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ರೈಲ್ವೇ ಟೆಲಿಕಾಂ ಸಚಿವಾಲಯ, ಸೈಬರ್‌ ಸೆಲ್‌, ಸರ್ಕಾರಿ ಅಧಿಕಾರಿಗಳು, ಆಧಾರ್‌ ಅಧಿಕಾರಿಗಳ ಜೊತೆ ಚರ್ಚಿಸಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನೆರವಿನ ಮೊರೆ ಹೋಯಿತು. 

ಮೊದಲು ಆಧಾರ್‌ ತಜ್ಞರು (Aadhar Experts) ಮೃತ ವ್ಯಕ್ತಿಗಳ ಎಡಗೈಯಿಂದ ಬೆರಳಚ್ಚನ್ನು ಪಡೆದರು. ಫಿಂಗರ್‌ಪ್ರಿಂಟ್‌ನಿಂದಾಗಿ 65 ಮಂದಿಯ ದೇಹದ ಗುರುತು ಪತ್ತೆಯಾಯಿತು.

ಮೃತದೇಹಗಳ ಪೈಕಿ ಕೆಲವರ ಕೈಗಳ ಚರ್ಮವೇ ಕಿತ್ತು ಹೋಗಿತ್ತು. ಹೀಗಾಗಿ ಫಿಂಗರ್‌ ಪ್ರಿಂಟ್‌ನಿಂದ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಸಂಚಾರ್‌ ಸಾಥಿ ತಂತ್ರಜ್ಞಾನ ಬಳಸಿ ಪ್ರಯಾಣಿಕರ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾದರು.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಕೆಲ ದಿನಗಳ ಹಿಂದೆ ಈ ಸಂಚಾರ್‌ ಸಾಥಿ (Sanchar Saathi) ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿದ್ದರು. ಫೋನ್‌ ನಂಬರ್‌ (Phone Number) ಮೂಲಕ ಪ್ರಯಾಣಿಕರ ಮಾಹಿತಿಯನ್ನು ಸಂಚಾರ್‌ ಸಾಥಿ ಟೂಲ್‌ ಪತ್ತೆ ಹಚ್ಚುತ್ತದೆ.

ಈ ಟೂಲ್‌ ಸಹಾಯದಿಂದ ಸಂತ್ರಸ್ತರ ಮುಖವನ್ನು ಸ್ಕ್ಯಾನ್‌ ಮಾಡಲಾಯಿತು. ಬಂದ ಫೋಟೋವನ್ನು  ಆಧಾರ್‌ ಕಾರ್ಡ್‌ ಭಾವಚಿತ್ರ ತಾಳೆ ಹಾಕಿ ಹೆಚ್ಚು ಸಾಮ್ಯತೆ ಕಂಡು ಬಂದ ಬಳಿಕ ಆಧಾರ್‌ ಲಿಂಕ್‌ ಮೊಬೈಲ್‌ ನಂಬರ್‌ ಪಡೆದು ವಿವರವನ್ನು ಪತ್ತೆ ಹಚ್ಚಲಾಯಿತು.

ಹೀಗಿದ್ದರೂ ಇನ್ನೂ ಕೆಲವು ಮೃತದೇಹಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಅಪಘಾತ ನಡೆಯುವ ಕೆಲ ಕ್ಷಣಗಳ ಮೊದಲು ಸಕ್ರಿಯವಾಗಿ ನಂತರ ನಿಷ್ಕ್ರಿಯವಾದ ಫೋನ್‌ ನಂಬರ್‌ಗಳನ್ನು ಪತ್ತೆ ಹಚ್ಚಿ ಮೃತರ ಗುರುತುಗಳನ್ನು ಪತ್ತೆ ಮಾಡಲಾಯಿತು.