ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂಧರ್

ವ್ಯಕ್ತಿಯೋರ್ವ ತನ್ನ ಪ್ರಿಯತಮೆಯನ್ನು ಕೊಂದು ಆಕೆಯ ಶವವನ್ನು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ರಾಜ್ ಕೇಸರ್ (35) ಕೊಲೆಯಾದ ಮಹಿಳೆ. ಯಮುನಾಪರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಹೇವಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಅರವಿಂದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ 15 ದಿನಗಳ ಹಿಂದೆ ತನ್ನ ಪ್ರೇಯಸಿಯನ್ನು ಕೊಂದು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಟ್ಯಾಂಕ್‌ನಲ್ಲಿ ಆಕೆಯ ಶವವನ್ನು ಬಚ್ಚಿಟ್ಟಿದ್ದ ಎಂದು ಸ್ಟೇಷನ್ ಹೌಸ್ ಆಫೀಸರ್ ತಿಳಿಸಿದ್ದಾರೆ. 

ಮೇ 30ರಂದು ಕೇಸರ್ ಅವರ ಕುಟುಂಬವು ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿತ್ತು. ಈ ಹಿನ್ನೆಲೆ ಆಕೆಯ ಫೋನ್ ಕರೆ ವಿವರಗಳ ಆಧಾರದ ಮೇಲೆ ಅರವಿಂದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ ಎಂದು ಎಸ್‌ಹೆಚ್‌ಒ ವಿಶ್ವಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ. 

ಆರೋಪಿಯ ಮನೆಯಿಂದ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.