ಡಾ. ಎಂ ಸಿ ಸುಧಾಕರ್ಗೆ ಒಲಿದ ಸಚಿವ ಭಾಗ್ಯ

ಚಿಕ್ಕಬಳ್ಳಾಫುರ: ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ ಸಿ ಸುಧಾಕರ್(Dr.MC Sudhakar)ಗೆ ಸಚಿವ ಭಾಗ್ಯ ಒಲಿದಿದ್ದು, ಇಂದು(ಮೇ.27) ಪ್ರಮಾಣ ವಚನ ಸ್ವೀಕರಿಸಿದರು. ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಪ್ರಭಾವಿ ನಾಯಕ, ಮೂರು ಬಾರಿ ಶಾಸಕ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಂಸಿ ಆಂಜನೇಯ ರೆಡ್ಡಿ ಅವರ ಮೊಮ್ಮಗನಾಗಿರುವ ಇವರು, 5 ಬಾರಿ ಶಾಸಕರಾಗಿದ್ದ ಎಂ.ಸಿ ಚೌಡರೆಡ್ಡಿ ಅವರ ಪುತ್ರರಾಗಿದ್ದಾರೆ. ತಾವು ರಾಜಕೀಯ ಪ್ರವೇಶಿಸುವ ಮೂಲಕ ತಮ್ಮ ಕುಟುಂಬದ ರಾಜಕಾರಣದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವೃತ್ತಿ ಮತ್ತು ಶಿಕ್ಷಣ
ಮೂಲತಃ ರಾಜಕೀಯ ಹಿನ್ನಲೆ ಇರುವ ಎಂ ಸಿ ಸುಧಾಕರ್ ಅವರು ಎಂ.ಡಿ.ಎಸ್ ಓದಿದ್ದು, (ಡೆಂಟಲ್ ವೈದ್ಯರು) ಉಪನ್ಯಾಸಕ ವೃತ್ತಿಯನ್ನ ಮಾಡಿದ್ದಾರೆ. ಇದೀಗ 54 ವರ್ಷ ವಯಸ್ಸಿನವರಾದ ಇವರು 2004ರಲ್ಲಿ ಹಾಗೂ 2008ರಲ್ಲಿ ಎರಡು ಭಾರಿ ಕಾಂಗ್ರೆಸ್ ಶಾಸಕರು ಆಗಿದ್ರು. ಬಳಿಕ ಎರಡು ಭಾರಿ ಪಕ್ಷೇತರ ಅಭ್ಯರ್ಥಿಯಾಗಿ ಸೋತಿದ್ರು. ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲಿ ಮೂರನೆ ಬಾರಿಗೆ ಗೆಲ್ಲುವುದರ ಮೂಲಕ ಶಾಸಕರಾಗಿದ್ದವರು ಸಚಿವರಾಗಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಕೀಯ ಹಿನ್ನಲೆ
1999ರಲ್ಲಿ ಚಿಂತಾಮಣಿಯಲ್ಲಿ ತಂದೆ ಚೌಡರೆಡ್ಡಿ ಅವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಬಳಿಕ ಡಾ.ಎಂ.ಸಿ ಸುಧಾಕರ್‌ ಅವರು ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ. 2004ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಸುಧಾಕರ್‌ ಅವರು ಗೆಲುವು ಸಾಧಿಸಿ, ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು. ಬಳಿಕ 2008ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದರು. ಆದರೆ, 2013ರಲ್ಲಿ ಡಾ ಎಂಸಿ ಸುಧಾಕರ್‌ಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಲಾಯಿತು.
ಈ ಹಿನ್ನೆಲೆ ಕಾಂಗ್ರೆಸ್‌ ತೊರೆದ ಸುಧಾಕರ್‌ 2013ರಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದರು. ಪಕ್ಷೇತರರಾಗಿ ಸ್ಪರ್ಧಿಸಿದರು ಕೂಡ ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸುಧಾಕರ್‌ಗೆ ಟಿಕೆಟ್‌ ನೀಡದೇ ಬೇರೆಯವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್‌ ಹೀನಾಯವಾಗಿ ಸೋಲು ಅನುಭವಿಸಿತ್ತು. 2016ರ ಫೆಬ್ರವರಿಯಲ್ಲಿ ಎಂಸಿ ಸುಧಾಕರ್‌ ವಾಪಸ್‌ ಕಾಂಗ್ರೆಸ್‌ಗೆ ಸೇರಿದರು. ಆದರೆ, 2018ರಲ್ಲಿ ಮತ್ತೆ ಟಿಕೆಟ್‌ ಸಿಗದ ಕಾರಣ ಪಕ್ಷ ತೊರೆದು, ಭಾರತೀಯ ಪ್ರಜಾ ಪಕ್ಷದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೆ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದರು.