ಪೊಲೀಸರಿಂದ ತಪ್ಪಿಸಿಕೊಳ್ಳಲು ನಗ್ನನಾಗಿಯೇ 4ನೇ ಮಹಡಿಯಿಂದ ಜಿಗಿದು ಆರೋಪಿ ಸಾವು: ಪ್ರಕರಣ ಸಿಐಡಿಗೆ ವರ್ಗಾವಣೆ

ಬೆಂಗಳೂರು: ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪ ಬೆತ್ತಲೆಯಲ್ಲೇ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಮೃತಪಟ್ಟಿರುವ ಪ್ರಕರಣದ ತನಿಖೆ ಮಾಡಲು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಅಪರಾಧ ಪ್ರಕರಣದ ವಿಚಾರಣೆ ಸಲುವಾಗಿ ನಿನ್ನೆ (ಮೇ 24) ವಶಕ್ಕೆ ಪಡೆಯಲು ಪೊಲೀಸರು ತೆರಳಿದಾಗ ಆರೋಪಿ ಮೊಹಮ್ಮದ್ ಹುಸೇನ್ (31) ಬೆಂಗಳೂರಿನ ಬೇಗೂರು ರಸ್ತೆಯ ಮನೆಯೊಂದರ 3ನೇ ಮಹಡಿಯಿಂದ ಕೆಳಗೆ ಜಿಗಿದು ಮೃತಪಟ್ಟಿದ್ದ. ಇದೀಗ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಪೊಲೀಸರೇ ತಳ್ಳಿ ಕೊಂದಿದ್ದಾರೆಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನಲೆ ಸಂಕ್ಷಿಪ್ತವಾದ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಘಟನೆ ಹಿನ್ನೆಲೆ
ಲಾಂಗ್‌ ತೋರಿಸಿ ಜೀವ ಬೆದರಿಕೆ: ತನ್ನ ಕುಟುಂಬದ ಜತೆ ನೆಲೆಸಿದ್ದ ಹುಸೇನ್‌, ಸ್ಥಳೀಯವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಸಹ ಪಾತ್ರವಹಿಸುತ್ತಿದ್ದ ಎಂಬ ಆರೋಪ ಬಂದಿದೆ. ಈ ಹಿಂದೆ ಆತನ ಮೇಲೆ ಬೊಮ್ಮನಹಳ್ಳಿ ಠಾಣೆಯಲ್ಲಿ ಸುಲಿಗೆ (ಐಪಿಸಿ 384) ಪ್ರಕರಣ ಕೂಡಾ ದಾಖಲಾಗಿತ್ತು. ಎರಡು ದಿನಗಳಿಂದ ಯುವತಿಯೊಬ್ಬಳಿಗೆ ರಸ್ತೆಯಲ್ಲಿ ಅಡ್ಡಗಟ್ಟಿಹುಸೇನ್‌ ಕಿರುಕುಳ ಕೊಡುತ್ತಿದ್ದ. ಮಂಗಳವಾರ ಕೂಡಾ ಆಕೆಗೆ ಲಾಂಗ್‌ ತೋರಿಸಿ ಹುಸೇನ್‌ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ತನ್ನ ತಂದೆ ಬಳಿ ಸಂತ್ರಸ್ತೆ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಕೊನೆಗೆ ಸಂತ್ರಸ್ತೆ ತಂದೆ ನೀಡಿದ ದೂರಿನ ಮೇರೆಗೆ ಹುಸೇನ್‌ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಬುಧವಾರ ಸಂಜೆ ಹುಸೇನ್‌ನನ್ನು ವಶಕ್ಕೆ ಪಡೆಯಲು ಆತನ ಮನೆಗೆ ತೆರಳಿದ್ದರು. ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಹುಸೇನ್‌ ಕುಟುಂಬ ನೆಲೆಸಿದೆ. ಮನೆಗೆ ಪೊಲೀಸರನ್ನು ಬಂದಿದ್ದನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ಮಹಡಿಯಿಂದ ಆತ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದರು.
ಆದ್ರೆ, ಪೊಲೀಸರ ಹೇಳಿಕೆಯನ್ನು ಅಲ್ಲಗೆಳೆದಿದ್ದು, ಪೊಲೀಸರೇ ಹುಸೇನ್‌ನನ್ನು ದೂಡಿ ಸಾಯಿಸಿದ್ದಾರೆ ಎಂದು ಮೃತನ ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಅಪರಾಧ ಪ್ರಕರಣದಲ್ಲಿ ಹುಸೇನ್‌ನನ್ನು ವಶಕ್ಕೆ ಪಡೆಯಲು ಮನೆಗೆ ಬಂದ ಪೊಲೀಸರು, ಬಳಿಕ ಆತನನ್ನು ಅರೆಬೆತ್ತಲೆಗೊಳಿಸಿ ಮನೋಸೋಇಚ್ಛೆ ಹೊಡೆದು ಕ್ರೌರ್ಯ ಮೆರೆದಿದ್ದಾರೆ. ಈ ದೌರ್ಜನ್ಯ ಎಸಗಿದ ಬಳಿಕ ಹುಸೇನ್‌ನನ್ನು ಹಿಡಿದು ಮೂರನೇ ಮಹಡಿಯಿಂದ ಕೆಳಗೆ ದೂಡಿದ್ದಾರೆ ಎಂದು ಕುಟುಂಬ ಸದಸ್ಯರು ಆಪಾದನೆಯಾಗಿದೆ.