‘ಸೂಪರ್ ಸಂಡೇ ವಿಥ್ ಸುದೀಪ’ ಎಪಿಸೋಡ್ನಲ್ಲಿ, ತಮ್ಮ ಜರ್ನಿಯಲ್ಲಿ ಯಾರು ಹಾವು, ಯಾರು ಏಣಿ ಎಂಬ ಪ್ರಶ್ನೆಯನ್ನು ಕಿಚ್ಚ ಸುದೀಪ್ ಕೇಳಿದ್ದರು. ಆಗ ಬಹುತೇಕರು ‘ಗಿಲ್ಲಿ’ಗೆ ಹಾವಿನ ಸ್ಥಾನ ನೀಡಿದ್ದಾರೆ. ಅದರಲ್ಲಿ ಕಾವ್ಯ ಶೈವ ನೀಡಿದ ಉತ್ತರ ವಿಶೇಷ ಗಮನ ಸೆಳೆಯಿತು.

ಹಾವು ಎಂದ ಅಶ್ವಿನಿ ಗೌಡ
ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಸಾಕಷ್ಟು ಜಗಳ ಆಗಿದೆ. ಆರಂಭದ ದಿನಗಳಿಂದಲೂ ಇವರು ಜಗಳ ಆಡಿಕೊಂಡಿದ್ದಾರೆ. ಗಿಲ್ಲಿ ನನಗೆ ತೇಜೋವಧೆ ಮಾಡಿದ್ದಾನೆ, ನನಗೆ ಏಕವಚನದಲ್ಲಿ ಮಾತನಾಡಿಸಿದರು, ನನ್ನ ವ್ಯಕ್ತಿತ್ವ ತಿರುಚಿದರು ಎಂದು ಅಶ್ವಿನಿ ಆರೋಪ ಮಾಡಿದ್ದರು.
ಅವರು ನನ್ನ ವ್ಯಕ್ತಿತ್ವವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.
ನಾನು ಬಂದಾಗಿನಿಂದ ಗಿಲ್ಲಿ ನಟ, ನನ್ನ ವ್ಯಕ್ತಿತ್ವವನ್ನು ಬದಲಾಯಿಸೋಕೆ ಟ್ರೈ ಮಾಡ್ತಿದ್ದಾನೆ ಎಂದು ರಘು ಅವರು ಹೇಳಿದ್ದಾರೆ. ಈ ಹಿಂದೆ ಕ್ವಾಟ್ಲೆ ಕಿಚನ್ ಶೋನಲ್ಲಿ ರಘು, ಗಿಲ್ಲಿ ನಟ ಭಾಗಿಯಾಗಿದ್ದರು. ಈಗ ಈ ಮನೆಯಲ್ಲಿ ರಘು ಅಣ್ಣ ಎಂದು ಯಾವಾಗಲೂ ಅವರ ಜೊತೆ ಇರುತ್ತ, ಗೇಲಿ ಮಾಡುತ್ತ, ತಮಾಷೆ ಮಾಡುತ್ತಿದ್ದ ಗಿಲ್ಲಿ ಕಂಡ್ರೆ ಈಗ ರಘುಗೆ ಆಗುತ್ತಿಲ್ಲ. ಇವರಿಬ್ಬರು ದೂರ ದೂರ ಆಗಿದ್ದಾರೆ.

ನನ್ನ ಕಾವು ಅಂತ ಕರೆಯುತ್ತಾನೆ
ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ಹಾವು ಪಟ್ಟ ಕೊಟ್ಟಿದ್ದಾರೆ. “ಪದೇ ಪದೇ ನನ್ನ ಕಾವು ಅಂತ ಕರೆಯೋದು, ಬೇರೆಯವರ ಕಣ್ಣಿಗೆ ಬೇರೆ ಥರ ಕಾಣಿಸ್ತಿದೆ. ಇದರಿಂದ ನನಗೆ ಹರ್ಟ್ ಆಗ್ತಿದೆ ಎಂದಾಗ ಅರ್ಥ ಮಾಡಿಕೊಂಡು ನಿಲ್ಲಿಸುತ್ತಾನೆ ಎಂದುಕೊಂಡಿದ್ದೆ. ಆ ರೀತಿ ಮಾಡಿಲ್ಲ” ಎಂದು ಹೇಳಿದ್ದಾರೆ.
ಕಾವ್ಯ ಶೈವ ಹಾಗೂ ಗಿಲ್ಲಿ ನಟ ಈ ಹಿಂದೆ ಡ್ಯಾನ್ಸ್ ಶೋವೊಂದರಲ್ಲಿ ಭಾಗಿಯಾಗಿದ್ದರು. ಈ ಮನೆಯಲ್ಲಿ ಜಂಟಿಯಾಗಿ ಆಟ ಶುರು ಮಾಡಿದ ಇವರ ಮಧ್ಯೆ ಸ್ನೇಹ ಇದೆ. ಗಿಲ್ಲಿ ನಟನಿಂದಲೇ ಕಾವ್ಯ ಇಲ್ಲಿರೋದು ಎಂದು ರಿಷಾ ಗೌಡ ಕೂಡ ಹೇಳಿದ್ದುಂಟು. ಗಿಲ್ಲಿ ಇಲ್ಲ ಅಂದರೆ ಕಾವ್ಯ ಜೀರೋ ಎಂದು ಕೂಡ ಹೇಳಿದ್ದರು.
ಅಣ್ಣಾ ಎಂದ ಕಾವ್ಯ
ಗಿಲ್ಲಿ ನಟ ಅವರು ಕಾವ್ಯ ಶೈವ ಅಂಥ ಹುಡುಗಿಯೇ ಬೇಕು, ಇವರನ್ನು ಮದುವೆ ಆಗ್ತೀನಿ ಎಂದು ಕಿಚ್ಚ ಸುದೀಪ್ ಮುಂದೆ ಹೇಳಿದ್ದುಂಟು. ಪದೇ ಪದೇ ಕಾವ್ಯ ಅವರು ಗಿಲ್ಲಿಗೆ ಅಣ್ಣಾ ಎಂದು ಕರೆದಿದ್ದುಂಟು. ಈ ಸ್ನೇಹ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
