ಗಣೇಶನಿಗೆ ಮೊದಲ ಪೂಜೆ ಯಾಕೆ?

ಯಾವುದೇ ಶುಭ ಕಾರ್ಯ ನಡೆಯುವ ಮೊದಲು ಗಣೇಶನಿಗೆ ಮೊದಲ ಪೂಜೆ ಮಾಡಲಾಗುತ್ತದೆ. ಗಣೇಶನಿಗೆ ಪೂಜೆ ಮಾಡಿದ ಬಳಿಕ ನಡೆಸಿದ ಕಾರ್ಯಗಳೆಲ್ಲವೂ ನಿರ್ವಿಘ್ನವಾಗಿ ಸಾಗುತ್ತದೆ ಎನ್ನುವುದು ನಂಬಿಕೆ. ಈ ಕಾರಣಕ್ಕೆ ಗಣೇಶನನ್ನು ಪ್ರಥಮ ವಂದಿತ ಎಂದೂ ಸಹ ಕರೆಯಲಾಗುತ್ತದೆ.

ಗಣೇಶನನ್ನು ಪ್ರಥಮ ವಂದಿತ ಎಂದು ಕರೆಯಲು ಕಾರಣವಿದೆ. ಪುರಾಣ ಕಥೆಗಳ ಪ್ರಕಾರ ಪಾರ್ವತಿ ದೇವಿ ಕೈಲಾಸದಲ್ಲಿ ತನ್ನ ಮೈಯಲ್ಲಿದ್ದ  ಮಣ್ಣಿನಿಂದ ಒಂದು ಮಗುವನ್ನು ನಿರ್ಮಿಸಿ ಅದಕ್ಕೆ ಜೀವ ತುಂಬಿ ಕೈಯಲ್ಲಿ ದಂಡವನ್ನು ನೀಡಿದ್ದಳು. ಅಷ್ಟೇ ಅಲ್ಲದೇ ನನ್ನ ಕೋಣೆಯನ್ನು ನೀನು ಕಾಯಬೇಕು. ನನ್ನ ಅಪ್ಪಣೆ ಇಲ್ಲದೇ ಯಾರಿಗೂ ಪ್ರವೇಶ ನೀಡಬಾರದು ಎಂದು ಸೂಚಿಸಿದ್ದಳು.

ಒಂದು ದಿನ ಶಿವ ಪಾರ್ವತಿಯ ಕೋಣೆಗೆ ಬಂದಾಗ ದ್ವಾರದಲ್ಲಿದ್ದ ಪುಟ್ಟ ಮಗು ಶಿವನನ್ನು ತಡೆಯುತ್ತಾನೆ. ಈ ವೇಳೆ ತಾಯಿಯ ಅಪ್ಪಣೆ ಇಲ್ಲದೇ ಯಾರಿಗೂ ಒಳಗಡೆ ಪ್ರವೇಶ ನೀಡುವುದಿಲ್ಲ ಎಂದು ಹೇಳುತ್ತಾನೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಸಿಟ್ಟಾದ ಶಿವ ಮಗುವಿನ ತಲೆಯನ್ನೇ ಕತ್ತರಿಸುತ್ತಾನೆ.

ಮಗು ಪತಿಯಿಂದ ಮೃತಪಟ್ಟ ವಿಚಾರ ತಿಳಿದು ಪಾರ್ವತಿಗೆ ದು:ಖ ಮತ್ತು ಸಿಟ್ಟು ಎರಡು ಬರುತ್ತದೆ. ತನ್ನ ಮಗನನ್ನು ಬದುಕಿಸದಿದ್ದರೆ ಜಗತ್ತನ್ನು ನಾಶಮಾಡುವುದಾಗಿ ಅವಳು ಪ್ರತಿಜ್ಞೆ ಮಾಡುತ್ತಾಳೆ. ತನ್ನ ತಪ್ಪಿನ ಅರಿವಾಗುತ್ತಿದ್ದಂತೆ ಉತ್ತರಾಭಿಮುಖವಾಗಿ ಮಲಗಿದ್ದ ಮರಿಯಾನೆಯ ತಲೆಯನ್ನು ತಂದು ಶಿವ ಜೋಡಿಸುತ್ತಾನೆ.

ಮಗನಿಗೆ ಜೀವ ಬಂದರೂ ದೇಹ ಮನುಷ್ಯನದ್ದೇ ಆದರೂ ಮುಖ ಆನೆಯ ರೀತಿ ಇರುವುದನ್ನು ನೋಡಿ ಪಾರ್ವತಿ ದುಳಖಿತಳಾಗುತ್ತಾಳೆ. ಈ ವೇಳೆ ಶಿವನು ಗಣೇಶನಿಗೆ ದೈವಿಕ ಶಕ್ತಿಗಳನ್ನು ದಯಪಾಲಿಸುತ್ತಾನೆ.  ಅಷ್ಟೇ ಅಲ್ಲದೇ ಗಣೇಶನನ್ನು ಆರಂಭದಲ್ಲಿ ಪೂಜೆ ಮಾಡದೇ ಇದ್ದರೆ ಆ ಕೆಲಸ ಎಂದಿಗೂ ಪೂರ್ಣಗೊಳ್ಳುವುದಿಲ್ಲ ಎಂದು ಘೋಷಿಸುತ್ತಾನೆ. ಈ ಕಾರಣಕ್ಕೆ ಗಣೇಶನು ಪ್ರಥಮ ಪೂಜ್ಯ ಅಥವಾ ಮೊದಲು ಪೂಜಿಸುತ್ತಾನೆ. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ.

ಗಣೇಶನ ಅರ್ಧ ದೇಹವು  ಶಿವನಿಂದ ರಚಿಸಲ್ಪಟ್ಟಿದ್ದರೆ  ಉಳಿದ ಅರ್ಧ ದೇಹ ಪಾರ್ವತಿ ಅಥವಾ ಶಕ್ತಿ ದೇವತೆಗಳಿಂದ ರಚಿಸಲಾಗಿದೆ. ಈ ಕಾರಣಕ್ಕೆ ಗಣೇಶ ವಿಶೇಷ ದೇವರಾಗಿ ಗುರುತಿಸುತ್ತಾನೆ.

ಗಣೇಶ  ವಿಘ್ನಗಳನ್ನು ನಿವಾರಿಸುವುದರಿಂದಲೇ ಪ್ರಥಮ ಪೂಜೆ ಸಲ್ಲುತ್ತದೆ. ಯುದ್ಧ ಇಲ್ಲವೇ ಶಾಂತಿ ಅಥವಾ ದೈನಂದಿನ ವ್ಯವಹಾರ, ಶುಭ ಕಾರ್ಯ ಯಾವುದೇ ಇರಲಿ, ಗಣೇಶನನ್ನು ಪೂಜಿಸದೇ ಕೆಲಸ ಆರಂಭಿಸಿದರೆ ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆ ಈಗಲೂ ಇದೆ.