ರಾಯಚೂರು: ಗುರು ರಾಯರ ಸನ್ನಿಧಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಏಳು ದಿನಗಳ ಕಾಲ ನಡೆದ 354 ನೇ ಆರಾಧನಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ರಾತ್ರಿ ವೇಳೆ ನಡೆದ ಸರ್ವ ಅಲಂಕಾರ ಸಮರ್ಪಣೆ ಉತ್ಸವದ ಮೂಲಕ 354 ನೇ ಆರಾಧನಾ ಮಹೋತ್ಸವ ಹಾಗೂ ಸಪ್ತರಾತ್ರೋತ್ಸವ ಮುಕ್ತಾಯವಾಗಿದೆ.

ಮೂಲರಾಮದೇವರ ಪೂಜೆ, ಮಹಾ ಮಂಗಳಾರತಿ, ಮಠದ ಪ್ರಾಕಾರದಲ್ಲಿ ವಾಹನೋತ್ಸವ, ರಥೋತ್ಸವ ಜೊತೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಎಲ್ಲಾ ಸೇವೆ ಉತ್ಸವಗಳನ್ನ ನೆರೆವೇರಿಸುವ ಮೂಲಕ ಸರ್ವಸಮರ್ಪಣೋತ್ಸವ ಆಚರಿಸಿದರು. ಕಟ್ಟಿಗೆ ರಥವನ್ನ ಮಠದ ಪ್ರಾಕಾರದಲ್ಲಿ ಎಳೆಯಲಾಯಿತು. ಈ ಮೂಲಕ ಆರಾಧನಾ ಮಹೊತ್ಸವ ಮುಕ್ತಾಯವಾಗಿದ್ದು, ಮಠದಲ್ಲಿ ಎಂದಿನಂತೆ ಪೂಜಾ ಕೈಂಕರ್ಯಗಳು ಮುಂದುವರೆದಿವೆ.


