ಭಿಕ್ಷೆಯಿಂದ ಸಂಗ್ರಹಿಸಿದ ಹಣವನ್ನು ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ದಾನ ಮಾಡಿದ ಮಂಗಳಮುಖಿ ರಾಜಮ್ಮ : ಸಿಎಂ ಪ್ರಶಂಸೆ

ಬಳ್ಳಾರಿ: ಭಿಕ್ಷೆ ಬೇಡಿದ ಹಣವನ್ನು ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ದಾನ ಮಾಡಿದ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯ ಮಂಗಳಮುಖಿ ಪಿ.ರಾಜಮ್ಮ ಅವರನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಸಿಎಂ, ರಾಜಮ್ಮರ ಸಾಮಾಜಿಕ ಕಳಕಳಿ ಅನನ್ಯ, ಅವರು ಎದುರಿಸುವ ಸವಾಲಿನ ನಡುವೆಯೂ ಸೇವೆ ಆದರ್ಶವಾದದ್ದು ಎಂದು ಕೊಂಡಾಡಿದ್ದಾರೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ರಾಜಮ್ಮ ಅವರ ನಿಸ್ವಾರ್ಥ ಸೇವೆ ಮಾದರಿ ಎಂದು  ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಾಲೆಗೆ ಹೋಗಲು ಸಾಧ್ಯವಾಗದ ಮಕ್ಕಳಿಗೆ ಸಹ ರಾಜಮ್ಮ ಆಸರೆಯಾಗಿದ್ದಾರೆ. ಭೀಕ್ಷೆ ಬೇಡಿ ತಂದ ಹಣದಿಂದ ಸಮವಸ್ತ್ರ, ಬಟ್ಟೆ, ಪುಸ್ತಕ ಇನ್ನಿತರ ಸಾಮಗ್ರಿಗಳನ್ನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಬಡ ವಿದ್ಯಾರ್ಥಿಗಳ ಏಳ್ಗೆಗೆ ಶ್ರಮಿಸುತ್ತಿದ್ದಾರೆ.