ರೇಣುಕಾಸ್ವಾಮಿ ಕೊಲೆ ಪ್ರಕರಣ – ‘ಡಿ’ ಗ್ಯಾಂಗ್ ಇಂದು ನ್ಯಾಯಾಲಯಕ್ಕೆ ಹಾಜರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು (ಆ.12) ನಟ ದರ್ಶನ್ ಹಾಗೂ ಇತರ ಆರೋಪಿಗಳು ಕೋರ್ಟ್‌ಗೆ ಹಾಜರಾಗಲಿದ್ದಾರೆ.

ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ಗೆ ಆರೋಪಿಗಳು ವಿಚಾರಣೆಗಾಗಿ ಹಾಜರಾಗಲಿದ್ದು, ಬಳಿಕ ಟ್ರಯಲ್ ನಡೆಸಲು ಡೇಟ್ ಫಿಕ್ಸ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಸರ್ಕಾರಿ ಪರ ವಕೀಲರು ಆರು ತಿಂಗಳ ಒಳಗೆ ಟ್ರಯಲ್ ಮುಗಿಸೋದಾಗಿ ತಿಳಿಸಿದ್ದಾರೆ. ಹಾಗಾಗಿ, ಇಂದು ದರ್ಶನ್ ಸೇರಿದಂತೆ ಎಲ್ಲಾ ಹದಿನೇಳು ಆರೋಪಿಗಳು ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾದ ನಂತರ ಟ್ರಯಲ್ ಡೇಟ್ ಫಿಕ್ಸ್ ಆಗಲಿದೆ ಎನ್ನಲಾಗಿದೆ. 

ಇಂದು ಕೋರ್ಟ್‌ನಲ್ಲಿ ವಿಚಾರಣೆ ನಂತರ ಟ್ರಯಲ್ ಡೇಟ್ ಫಿಕ್ಸ್ ಆಗೋದು ಒಂದು ಕಡೆಯಾದ್ರೆ, ರಾಜ್ಯ ಸರ್ಕಾರ ಜಾಮೀನು ರದ್ದು ಮಾಡುವಂತೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ಇದೇ ವಾರದಲ್ಲಿ ತೀರ್ಪು ಬಹುತೇಕ ಖಚಿತ ಎನ್ನಲಾಗಿದೆ.

ನಟ ದರ್ಶನ್, ಪವಿತ್ರ ಗೌಡ, ರಾಘವೇಂದ್ರ, ಪವನ್, ಜಗದೀಶ್, ಅನುಕುಮಾರ್, ರವಿಶಂಕರ್ ಜಾಮೀನು ರದ್ದು ಮಾಡುವಂತೆ ಸರ್ಕಾರ ಈಗಾಗಲೇ ಅರ್ಜಿ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಆರೋಪಿಗಳ ಪರ ವಕೀಲರಿಗೆ ಲಿಖಿತ ವಾದ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಕಳೆದ ವಾರ ಆರೋಪಿಗಳ ಪರ ವಕೀಲರು ಲಿಖಿತ ವಾದ ಸಲ್ಲಿಸಿದ್ದಾರೆ. ಹಾಗಾಗಿ ಇದೇ ವಾರದಲ್ಲಿ ಆದೇಶ ಕೂಡ ಸುಪ್ರೀಂ ಕೋರ್ಟ್ ಪ್ರಕಟ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಜಾಮೀನು ರದ್ದಾದರೆ ಮತ್ತೆ ಎಲ್ಲಾ ಆರೋಪಿಗಳು ಜೈಲು ಸೇರಬೇಕಾಗುತ್ತದೆ.