
ನಟಿ ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಅವರು ಅಭಿನಯಿಸಿದ್ದಾರೆ. ಈ ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಿಡುಗಡೆ ಆಯಿತು. ಈಗ ರಚಿತಾ ರಾಮ್ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ. ನಟಿಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಸಿನಿಮಾದ ಪ್ರಚಾರಕ್ಕೆ ಬಾರದೇ ರಚಿತಾ ರಾಮ್ ಅವರು ಅಸಹಕಾರ ತೋರುತ್ತಿದ್ದಾರೆ ಎಂದು ನಿರ್ದೇಶಕ ನಾಗಶೇಖರ್ ನಟ ಶ್ರೀನಗರ ಕಿಟ್ಟಿ ಅವರು ಆರೋಪಿಸಿದ್ದಾರೆ.
‘ನಾವು ಇಂಥ ಕಲಾವಿದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಹಕಾರ ಕೊಟ್ಟಿಲ್ಲ. ರಾಕ್ಲೈನ್ ವೆಂಕಟೇಶ್ ಮನವೊಲಿಸಿದರೂ ಸಹ ಒಪ್ಪಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಸಪೋರ್ಟ್ ಕೊಟ್ಟಿದ್ದಾರೆ. ಆದರೆ, ನಟಿ ರಚಿತಾ ರಾಮ್ ಚಿತ್ರದ ಪ್ರಚಾರಕ್ಕೆ ಬಂದಿಲ್ಲ. ನಾವು ರಚಿತಾ ರಾಮ್ ಅವರಿಗೆ ಸಂಭಾವನೆ ಕಡಿಮೆ ಕೊಟ್ಟಿಲ್ಲ. ಆದರೂ ನಟಿ ರಚಿತಾ ರಾಮ್ ಚಿತ್ರದ ಪ್ರಚಾರಕ್ಕೆ ಬಂದಿಲ್ಲ’ ಎಂದು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡದವರು ಆರೋಪ ಮಾಡಿದ್ದಾರೆ.
‘ರಮ್ಯಾ, ತಮನ್ನಾ ಮುಂತಾದ ಕಲಾವಿದರ ಜೊತೆ ಸಿನಿಮಾ ಮಾಡಿದ್ದೀನಿ. ಆದರೆ ಯಾವ ನಟಿಯೂ ಇಂತಹ ಸಮಸ್ಯೆ ಕೊಟ್ಟಿಲ್ಲ. ಸಿನಿಮಾ ಇಷ್ಟು ದಿನ ಪ್ರದರ್ಶನ ಕಂಡರೂ ಕೂಡ ಒಂದು ದಿನವೂ ಸಪೋರ್ಟ್ ಮಾಡಿಲ್ಲ’ ಎಂದು ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಚಿತಾ ರಾಮ್ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
‘ನಾವು ಕಳೆದ 45 ದಿನಗಳಿಂದ ನಟಿ ರಚಿತಾ ರಾಮ್ ಅವರನ್ನು ಮ್ಯಾನೇಜರ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರನ್ನು ಪ್ರಚಾರಕ್ಕೆ ಕರೆತರಲು ವಿಫಲರಾಗಿದ್ದೇವೆ. ಅನ್ನ ತಿಂದ ಚಿತ್ರಕ್ಕೆ ರಚಿತಾ ರಾಮ್ ದ್ರೋಹ ಬಗೆದಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ನಿರ್ಮಾಪಕ ಛಲವಾದಿ ಕುಮಾರ್ ಅವರು ಫಿಲ್ಮ್ ಚೇಂಬರ್ಗೆ ಪತ್ರ ಬರೆದಿದ್ದಾರೆ.
ಈ ಮೊದಲು ‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ಜನವರಿ 17ರಂದು ಬಿಡುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕಾನೂನಿನ ತೊಂದರೆ ಉಂಟಾಗಿದ್ದರಿಂದ ಪ್ರದರ್ಶನ ನಿಲ್ಲಿಸಲಾಯಿತು. ಅಲ್ಲದೇ ಸಿನಿಮಾಗೆ ಕೆಲವು ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿತು. ಆ ಎಲ್ಲ ವಿಘ್ನಗಳು ನಿವಾರಣೆ ಆದ ಬಳಿಕ ಜೂನ್ 6ರಂದು ಸಿನಿಮಾವನ್ನು ಮರು ಬಿಡುಗಡೆ ಮಾಡಲಾಯಿತು.