ಮೊದಲು ನಿರ್ದೇಶಕರಾಗಿ ಯಶಸ್ಸು ಕಂಡು, ನಂತರ ಹೀರೋ ಆಗಿ ಯಶಸ್ಸು ಪಡೆದ ಅನೇಕರು ಇದ್ದಾರೆ. ಅದಕ್ಕೆ ಉಪೇಂದ್ರ ಅವರಿಗಿಂತ ಬೆಸ್ಟ್ ಉದಾಹರಣೆ ಬೇರೊಬ್ಬರಿಲ್ಲ. ಅದೇ ರೀತಿ ಈಗ ಕಾಲಿವುಡ್ನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಹೀರೋ ಆಗಲು ಹೊರಟಿದ್ದಾರೆ. ನಿರ್ದೇಶಕನಾಗಿ ಲೋಕೇಶ್ ಕನಗರಾಜ್ ಅವರಿಗೆ ಸಖತ್ ಬೇಡಿಕೆ ಇದೆ. ಸ್ಟಾರ್ ನಟರ ಸಿನಿಮಾಗಳಿಗೆ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅದರ ನಡುವೆ ಅವರಿಗೆ ಹೀರೋ ಆಗುವ ಅವಕಾಶ ಸಿಕ್ಕಿದೆ. ಮೊದಲ ಸಿನಿಮಾಗಾಗಿ ಅವರು ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ ಎಂಬುದು ವಿಶೇಷ.

ತಮಿಳು ಚಿತ್ರರಂಗದಲ್ಲಿ ಲೋಕೇಶ್ ಕನಗರಾಜ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕಾರ್ತಿ ನಟನೆಯ ಕೈದಿ, ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಸಿನಿಮಾಗಳ ಮೂಲಕ ಲೋಕೇಶ್ ಕನಗರಾಜ್ ಅವರ ಖ್ಯಾತಿ ಹೆಚ್ಚಿದೆ. ಸದ್ಯಕ್ಕೆ ಅವರು ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇಷ್ಟೆಲ್ಲ ಬ್ಯುಸಿ ಆಗಿರುವ ಅವರಿಗೆ ಹೀರೋ ಆಗುವ ಆಸೆ ಚಿಗುರಿದೆ.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ನಿರ್ದೇಶನ ಮಾಡಿದ್ದ ಅರುಣ್ ಮಾದೇಶ್ವರನ್ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ಲೋಕೇಶ್ ಕನಗರಾಜ್ ಹೀರೋ ಆಗಲಿದ್ದಾರೆ. ಇದರಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಇರಲಿವೆ. ಅದಕ್ಕಾಗಿ ಲೋಕೇಶ್ ಕನಗರಾಜ್ ಅವರು ಈಗಾಗಲೇ ಮಾರ್ಷಲ್ ಆರ್ಟ್ ತರಬೇತಿ ಪಡೆಯುಲಿದ್ದಾರೆ. ತರಬೇತಿ ಪಡೆಯಲು ಅವರು ಥಾಯ್ಲೆಂಡ್ಗೆ ಹೋಗಲಿದ್ದಾರೆ.
ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿರುವ ಸಿನಿಮಾಗಳಲ್ಲಿ ಆ್ಯಕ್ಷನ್ ಅಬ್ಬರ ಇರುತ್ತದೆ. ಈಗ ಅವರ ನಟನೆಯ ಸಿನಿಮಾದಲ್ಲಿ ಕೂಡ ಪ್ರೇಕ್ಷಕರು ಅದನ್ನು ನಿರೀಕ್ಷಿಸಬಹುದು. ಹೀರೋ ಆಗಿ ಅವರನ್ನು ಹೊಸ ಅವತಾರದಲ್ಲಿ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಹೀರೋ ಆಗುತ್ತಿದ್ದರೂ ಕೂಡ ಲೋಕೇಶ್ ಅವರಿಗೆ ನಿರ್ದೇಶನದಲ್ಲಿ ಕೈತುಂಬ ಆಫರ್ಗಳಿವೆ. ಈಗ ಅವರು ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆ ಬಳಿಕ ‘ಕೈದಿ 2’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ನಂತರ ಆಮಿರ್ ಖಾನ್ ನಟಿಸಲಿರುವ ಸೂಪರ್ ಹೀರೋ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಲಿದ್ದಾರೆ.
