ಬಳ್ಳಾರಿ: ಸ್ನಾನಕ್ಕೆಂದು ನದಿಗೆ ಇಳಿದ ಬಾಲಕನೊಬ್ಬನ ಮೇಲೆ ಮೊಸಳೆಯೊಂದು ಏಕಾಏಕಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿಂದು ನಡೆದಿದೆ. 16 ವರ್ಷದ ವೇದಮೂರ್ತಿ ಗಾಯಗೊಂಡಿರುವ ಬಾಲಕ.

ಇಂದು ಬೆಳಗ್ಗೆ ಸ್ನಾನ ಮಾಡಲೆಂದು ಬಾಲಕ ವೇದಮೂರ್ತಿ, ನದಿಗೆ ಇಳಿದಾಗ ಮೊಸಳೆ ದಿಢೀರ್ ದಾಳಿ ಮಾಡಿ ಗಾಯಗೊಳಿಸಿದೆ. ಮೊಸಳೆ ಬಾಯಿಗೆ ಸಿಕ್ಕಿಕೊಂಡ ಬಾಲಕನನ್ನು ಸ್ಥಳದಲ್ಲೇ ಇದ್ದ ವೀರೇಶ್ ಎಂಬ ಯುವಕ ರಕ್ಷಿಸಿದ್ದಾನೆ. ಬಾಲಕನ ಕೈ ಮತ್ತು ಎದೆ ಭಾಗದಲ್ಲಿ ಗಾಯಗೊಳಿಸಿದ್ದು, ಪಕ್ಕದಲ್ಲಿ ಸಿಕ್ಕ ಕಲ್ಲನ್ನು ತೆಗೆದುಕೊಂಡು ಮೊಸಳೆಯ ಮೇಲೆ ಎತ್ತಾಕಿ ವೀರೇಶ್ ಆ ಬಾಲಕನನ್ನು ರಕ್ಷಿಸಿದ್ದಾರೆ.
ಬಾಲಕನ ಕೈ ಮತ್ತು ಎದೆ ಭಾಗದಲ್ಲಿ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಾಳು ಬಾಲಕನನ್ನು ತಕ್ಷಣ ಕಂಪ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.



