ಜೂ. ಎನ್​ಟಿಆರ್​ ಜನ್ಮದಿನಕ್ಕೆ ಪ್ರಶಾಂತ್‌ ನೀಲ್‌ ಚಿತ್ರದಿಂದ ಇಲ್ಲ ಯಾವುದೇ ಅಪ್​ಡೇಟ್

ಟಾಲಿವುಡ್ ನಟ ಜೂನಿಯರ್​ ಎನ್​ಟಿಆರ್​ ಅವರು ಮೇ 20ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಜತೆಗಿನ ಸಿನಿಮಾ ತಂಡದಿಂದ ಗ್ಲಿಂಪ್​ಸ್ ಬಿಡುಗಡೆ ಆಗುವುದಿಲ್ಲ. ಈ ವಿಚಾರವನ್ನು ಸ್ವತಃ ನಿರ್ಮಾಣ ಸಂಸ್ಥೆ ಕಡೆಯಿಂದಲೇ ಸ್ಪಷ್ಟಪಡಿಸಲಾಗಿದೆ.

ಸ್ಟಾರ್ ಹೀರೋಗಳ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ತಂಡಗಳಿಂದ ಅಪ್​ಡೇಟ್ ನೀಡಲಾಗುತ್ತದೆ. ಅಭಿಮಾನಿಗಳು ಅದರ ನಿರೀಕ್ಷೆಯಲ್ಲಿ ಇರುತ್ತಾರೆ. ಈ ಬಾರಿ ನಟ ಜೂನಿಯರ್ ಎನ್​ಟಿಆರ್​ ಅವರ ಬರ್ತ್​ಡೇ ಪ್ರಯುಕ್ತ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಬಗ್ಗೆ ಏನಾದರೂ ಅಪ್​ಡೇಟ್ ಸಿಗಬಹುದು ಎಂದು ಫ್ಯಾನ್ಸ್ ಕಾದಿದ್ದರು. ಆ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಒಂದು ಮಾಹಿತಿ ನೀಡಲಾಗಿದೆ. ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್ ಕಾಂಬಿನೇಷನ್​ನ ಸಿನಿಮಾದಿಂದ ಗ್ಲಿಂಪ್ಸ್ ರಿಲೀಸ್ ಆಗುವುದಿಲ್ಲ ಎಂದು ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ತಿಳಿಸಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿಸಲಾಗಿದೆ

ಮೇ 20ಕ್ಕೆ ಜೂನಿಯರ್‌ ಎನ್‌ಟಿಆರ್‌ ಹುಟ್ಟುಹಬ್ಬ. ‘ಅಂದು ‘ವಾರ್‌ 2’ ಸಿನಿಮಾದಿಂದ ಅಪ್‌ಡೇಟ್‌ ಬರಲಿದೆ. ಆ ಹಿನ್ನೆಲೆಯಲ್ಲಿ, ನಮ್ಮ ಸಿನಿಮಾದ ಗ್ಲಿಂಪ್ಸ್‌ ಮುಂದೂಡುತ್ತಿದ್ದೇವೆ’ ಎಂದು ಮೈತ್ರಿ ಮೂವೀ ಮೇಕರ್ಸ್‌ ಹಾಗೂ ಎನ್‌ಟಿಆರ್‌ ಆರ್ಟ್ಸ್‌ ಸಂಸ್ಥೆಗಳು ಸೋಶಿಯಲ್‌ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿವೆ. ಹಾಗಾದರೆ ಗ್ಲಿಂಪ್ಸ್ ಬರುವುದು ಯಾವಾಗ? ‘ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಶುಭ ಸಂದರ್ಭದಲ್ಲಿ ವಿಶೇಷ ಅಪ್‌ಡೇಟ್ ಹಂಚಿಕೊಳ್ಳಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ನಮಗೆ ಹುರಿದುಂಬಿಸಲು ಲೆಕ್ಕವಿಲ್ಲದಷ್ಟು ಕಾರಣಗಳನ್ನು ನೀಡಿದ ವ್ಯಕ್ತಿಯ ಜನ್ಮದಿನವನ್ನು ಆಚರಿಸಲು ನೀವೆಲ್ಲ ಎಷ್ಟು ಉತ್ಸುಕರಾಗಿದ್ದೀರಿ ಎಂಬುದು ನಮಗೆ ತಿಳಿದಿದೆ. ‘ವಾರ್ 2’ ಸಿನಿಮಾದ ಕಂಟೆಂಟ್ ಬಿಡುಗಡೆ ಆಗುತ್ತಿದೆ. ಆ ಗ್ಲಿಂಪ್ಸ್‌ಗೆ ಅವಕಾಶ ನೀಡುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ. ಗ್ಲಿಂಪ್ಸ್‌ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಈ ವರ್ಷ, ನಾವು ಮ್ಯಾನ್ ಆಫ್ ಮಾಸಸ್ ಎನ್​ಟಿಆರ್​ ಅವರ ಹುಟ್ಟುಹಬ್ಬದ ಆಚರಣೆಯನ್ನು ವಾರ್​ 2 ಸಿನಿಮಾಗಾಗಿ ಅರ್ಪಿಸುತ್ತಿದ್ದೇವೆ’ ಎಂದು ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆ ಕೇಳಿದೆ.

ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್​ಟಿಆರ್ ಒಟ್ಟಾಗಿ ಮಾಡುತ್ತಿರುವ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಇದು ಆಕ್ಷನ್ ಸಿನಿಮಾ ಆಗಿರಲಿದ್ದು, 2026ರ ಜೂನ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಜೂನಿಯರ್​ ಎನ್​ಟಿಆರ್ ಅವರ ಫ್ಯಾನ್ಸ್ ಈ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಮುಂತಾದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

‘ಮೈತ್ರಿ ಮೂವೀ ಮೇಕರ್ಸ್’, ‘ಎನ್​ಟಿಆರ್​​ ಆರ್ಟ್ಸ್’ ಬ್ಯಾನರ್‌ ಮೂಲಕ ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ, ಹರಿ ಕೃಷ್ಣ ಕೊಸರಾಜು ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಗುಲ್ಶನ್ ಕುಮಾರ್, ಭೂಷಣ್ ಕುಮಾರ್ ಮತ್ತು ಟಿ ಸೀರೀಸ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿದೆ. ಭುವನ್ ಗೌಡ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ರವಿ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.