ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲೇ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ರಾಸುಗಳು ಸಾವು

ಚಾಮರಾಜನಗರ ಜಿಲ್ಲೆಯಲ್ಲಿ ಪಶು ವೈದ್ಯರ ತೀವ್ರ ಕೊರತೆ ಉಂಟಾಗಿದ್ದು, ಕಳೆದ ಒಂದುವರೆ ವರ್ಷದಲ್ಲಿ 900ಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ. ಇನ್ನು ಇಡೀ ಜಿಲ್ಲೆಯಲ್ಲಿ ಕೇವಲ 10 ಪಶು ವೈದ್ಯರಿದ್ದಾರೆ. ಸರ್ಕಾರದ ನಿರ್ಲಕ್ಷ್ಯಕ್ಕೆ ರೈತರು ಖಾಸಗಿ ವೈದ್ಯರ ಮೊರೆ ಹೋಗುವಂತಾಗಿದ್ದು, ಆರ್ಥಿಕ ಹೊರೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ, ಮೇ 16: ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲೇ ಪಶು ವೈದ್ಯರ ಸಮಸ್ಯೆ ಕಾಡುತ್ತಿದೆ. ಪರಿಣಾಮ ಕಳೆದ ಒಂದುವರೆ ವರ್ಷದಲ್ಲಿ ಬರೋಬ್ಬರಿ 900ಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ . ಅಸಲಿಗೆ ಪಶು ವೈದ್ಯರ ಸಮಸ್ಯೆಯಾಗಲು ಕಾರಣವೇನು? ಪಶು ವೈದ್ಯರ ಸಮಸ್ಯೆಯಿಂದ ರೈತರಿಗೆ ಉಂಟಾಗುತ್ತಿರುವ ಸಮಸ್ಯೆ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಲ್ಲೆಯಲ್ಲಿ ಕೇವಲ 10 ಮಂದಿ ಪಶು ವೈದ್ಯರು

ಗಡಿ ನಾಡು ಚಾಮರಾಜನಗರ ಜಿಲ್ಲಾದ್ಯಂತ ಪಶು ವೈದ್ಯರ ಸಮಸ್ಯೆ ಕಾಡುತ್ತಿದೆ. ಕೇವಲ ಜಿಲ್ಲೆಯಲ್ಲಿ ಇರುವುದು 10 ಮಂದಿ ಪಶು ವೈದ್ಯರು ಅಂದ್ರೆ ನಂಬಲೇಬೇಕು. ದುರಂತ ಅಂದರೆ ಪಶುಸಂಗೋಪನಾ ಸಚಿವರ ಕೆ.ವೆಂಕಟೇಶ್, ಇದೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಹೌದು. ಇಂತ ಉಸ್ತುವಾರಿಗಳ ಜಿಲ್ಲೆಯಲ್ಲೇ ಈ ರೀತಿಯಾದರೆ ಇನ್ನು ಬೇರೆ ಜಿಲ್ಲೆಗಳ ಕಥೆ ಏನೆಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಕಳೆದ ಒಂದುವರೆ ವರ್ಷದಲ್ಲಿ ಬರೋಬ್ಬರಿ 900ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಇದಕ್ಕೆ ಕಾರಣವೇನು ಎಂದು ನೋಡುವುದಾದರೆ, ಸೂಕ್ತ ಸಮಯದಲ್ಲಿ ಲಸಿಕೆ, ಚುಚ್ಚುಮದ್ದುಗಳು ನೀಡಲು ಸಾಧ್ಯವಾಗದಿರುವುದು ಎಂದು ರೈತರು ಹೇಳುತ್ತಿದ್ದಾರೆ. ಪಶುವೈದ್ಯರ ಸಮಸ್ಯೆಯಿಂದ ರೈತ ವರ್ಗ, ಖಾಸಗಿ ವೈದ್ಯರು ಹಾಗೂ ಖಾಸಗಿ ಕ್ಲಿನಿಕ್​​ಗಳ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಉಂಟಾಗಿದೆ.

ಒಂದು ರಾಸುಗೆ ತಿಂಗಳಿಗೆ ಖಾಸಗಿಯಲ್ಲಿ ಚಿಕಿತ್ಸೆ, ಲಸಿಕೆ ಕೊಡಿಸಿದರೆ, ಕನಿಷ್ಠ 5 ಸಾವಿರ ರೂ. ಹಣ ಖರ್ಚಾಗುತ್ತೆ. ಹಾಗಾಗಿ ಆದಷ್ಟು ಬೇಗ ಪಶು ವೈದ್ಯರನ್ನ ನೇಮಕ ಮಾಡಿ ಎಂದು ರೈತರು ಆಗ್ರಹಿಸುತ್ತಿದ್ದಾರೆ. ಇನ್ನು ನೇಮಕಾತಿ ವಿಚಾರದಲ್ಲಿ ಸರ್ಕಾರ ಉದಾಸೀನ ತೊರುತ್ತಿದೆ. ಇದರ ಜೊತೆಗೆ ಖಾಸಗಿ ವಲಯಕ್ಕೆ ಹೊಲಿಕೆ ಮಾಡ್ಕೊಂಡ್ರೆ ಸರ್ಕಾರಿ ವೈದ್ಯರ ವೇತನ ಕಡಿಮೆ, ಜೊತೆಗೆ ಸುಸಜ್ಜಿತ ಕಟ್ಟಡವಿಲ್ಲ, ಮೂಲಭೂತ ಸೌಕರ್ಯದ ಕೊರತೆ, ಹೀಗೆ ಎಲ್ಲಾ ಕಾರಣದಿಂದಾಗಿ ಸರ್ಕಾರಿ ಪಶು ವೈದ್ಯರಾಗಲು ಈಗಿನ ವೈದ್ಯರು ಮುಂದಾಗುತ್ತಿಲ್ಲ ಎಂಬ ಮಾತು ಸಹ ಕೇಳಿ ಬರುತ್ತಿದೆ.

ಅದೇನೆ ಹೇಳಿ ಒಂದೆಡೆ ಪಶು ವೈದ್ಯರ ಸಮಸ್ಯೆ, ಮತ್ತೊಂದೆಡೆ ಔಷಧದ ಅಭಾದತೆ, ಮತ್ತೊಂದೆಡೆ 900 ಕ್ಕೂ ಹೆಚ್ಚು ರಾಸುಗಳ ಮರಣ ಮೃದಂಗ, ಈ ಎಲ್ಲದರಿಂದ ಅನ್ನದಾತರು ರೋಸಿ ಹೋಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಮತ್ತು ಪಶುಸಂಗೋಪನಾ ಇಲಾಖೆ ಈ ಸಮಸ್ಯೆಯನ್ನ ಆದಷ್ಟು ಬೇಗ ಬಗೆಹರಿಸಬೇಕಿದೆ.