ಕಲಬುರಗಿಯಲ್ಲಿ ಜನಿವಾರ ತೆಗೆಸಿದ ಕೇಸ್​: ವಿದ್ಯಾರ್ಥಿ ದೂರಿನ ಮೇರೆಗೆ ಇಬ್ಬರ ಬಂಧನ

ಕಲಬುರಗಿಯಲ್ಲಿ ನೀಟ್‌ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಪರೀಕ್ಷೆ ಬರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ದೂರು ಆಧರಿಸಿ ಇಬ್ಬರು ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಎಫ್​ಐಆರ್​ ದಾಖಲಿಸಿ ಬಂಧಿಸಿಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಕಮಿಷನರ್​ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ. ಈ ಘಟನೆ ಬ್ರಾಹ್ಮಣ ಸಮುದಾಯದವ ಆಕ್ರೋಶಕ್ಕೆ ಕಾರಣವಾಗಿದೆ.

ಕಲಬುರಗಿ, ಮೇ 05:  ನಗರದಲ್ಲಿ ಜನಿವಾರ ಜಟಾಪಟಿ ಮುನ್ನಲೆಗೆ ಬಂದಿದೆ. ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆದು ಬಾ ಅಂತ ಹೇಳಿದ್ದಿಕ್ಕೆ ಕೆರಳಿ ಕೆಂಡವಾದ ಬ್ರಾಹ್ಮಣ ಸಮುದಾಯ ಬೀದಿಗಳಿದು ಪ್ರತಿಭಟಿಸಿದ್ದರು. ಇದೀಗ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ದೂರಿನ ಮೇರೆಗೆ ಇಬ್ಬರು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಎಫ್​​ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್​ ಎಸ್.ಡಿ.ಶರಣಪ್ಪ ಹೇಳಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪರೀಕ್ಷಾರ್ಥಿ ಶ್ರೀಪಾದ್ ಪಾಟೀಲ್ ದೂರು ನೀಡಿದ್ದ. ಆ ಹಿನ್ನಲೆ ತಡರಾತ್ರಿ ಇಬ್ಬರ ವಿರುದ್ದ ಎಫ್​ಐಆರ್​ ದಾಖಲಿಸಲಾಗಿತ್ತು.

ಪೊಲೀಸ್ ಕಮಿಷನರ್​ ಎಸ್.ಡಿ.ಶರಣಪ್ಪ ಹೇಳಿದ್ದಿಷ್ಟು

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಲಬುರಗಿ ನಗರ ಪೊಲೀಸ್ ಕಮಿಷನರ್​ ಎಸ್.ಡಿ.ಶರಣಪ್ಪ, ಪರೀಕ್ಷಾ ಕೇಂದ್ರದ ಸಿಬ್ಬಂದಿಯಾದ ಶರಣಗೌಡ, ಗಣೇಶ ಬಂಧಿತರು. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್​ ಠಾಣೆಯಲ್ಲಿ ಬಿಎನ್​ಎಸ್ ಕಾಯ್ದೆ 298 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.

ಶರಣಗೌಡ, ಗಣೇಶ ಇಬ್ಬರು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಸಿಬ್ಬಂದಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಪ್ರಕರಣದ ತನಿಖೆ ಮುಂದುವರಿಸಿದ್ದೇವೆ ಎಂದು ಮಾಹಿತಿ ಅವರು ನೀಡಿದ್ದಾರೆ.

ಕಲಬುರಗಿಯ ಸೇಂಟ್ ಮೇರಿ ಕಾಲೇಜಿನಲ್ಲಿ ನಿನ್ನೆ ಜನಿವಾರ ತೆಗೆಸಿ ಪರೀಕ್ಷೆ ಬರೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಪಾದ್ ಪಾಟೀಲ್‌ ಅನ್ನೋ ಅಭ್ಯರ್ಥಿಯ ಜನಿವಾರ ತೆಗೆಸಿ ಒಳಗೆ ಬಿಟ್ಟಿದ್ದಾರೆ. ಇದು ಗೊತ್ತಾಗ್ತಿದ್ದಂತೆ ಆಕ್ರೋಶಗೊಂಡ ಬ್ರಾಹ್ಮಣ ಸಮುದಾಯದವರು, ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ಮಾಡಿದ್ದರು. ಜನಿವಾರ ತೆಗೆಸಿದವರನ್ನ ಅಮಾನತು ಮಾಡಬೇಕು ಅಂತಾ ಪಟ್ಟು ಹಿಡಿದ ಪ್ರತಿಭಟನಾಕಾರರು, ಪರೀಕ್ಷೆ ಮುಗಿಯುವವರೆಗೂ ಅಲ್ಲೇ ಹೋರಾಟ ಮಾಡಿದ್ದರು.

ಪರೀಕ್ಷಾ ಕೇಂದ್ರದಿಂದ ಹೊರಬಂದ ಶ್ರೀಪಾದ್‌ ಪಾಟೀಲ್‌, ಅಧಿಕಾರಿಗಳ ಸೂಚನೆ ಹಿನ್ನೆಲೆ ಜನಿವಾರ ತೆಗೆದು ತಂದೆ ಕೈಗೆ ಕೊಟ್ಟಿದ್ದೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಗಲಿಬಿಲಿಯಲ್ಲಿ ನೋಂದಣಿ ಸಂಖ್ಯೆ ತಪ್ಪಾಗಿ ಬರೆದಿದ್ದೇನೆ ಅಂತಾ ಅಳಲು ತೋಡಿಕೊಂಡಿದ್ದ.

ಪರೀಕ್ಷಾ ಕೇಂದ್ರದ ಬಳಿಯೇ ಜನಿವಾರ ಧಾರಣೆ

ಪರೀಕ್ಷೆ ಮುಗಿಯೋವರೆಗೂ ಅಲ್ಲೇ ಕಾದು ಕೂತಿದ್ದ ಬ್ರಾಹ್ಮಣ ಸಮುದಾಯದವರು, ನಂತರ ಎಕ್ಸಾಂ ಸೆಂಟರ್‌ ಎದುರೇ ಶಾಸ್ತ್ರೋಕ್ತವಾಗಿ ಜನಿವಾರ ಧಾರಣೆ ಮಾಡಿದ್ರು.