ಆನ್​ಲೈನ್​ ಬೆಟ್ಟಿಂಗ್, ಗೇಮಿಂಗ್ ಆ್ಯಪ್​​ಗೆ ಕಡಿವಾಣ: ಶೀಘ್ರ ಹೊಸ ಮಾನದಂಡ ರೂಪಿಸ್ತೇವೆಂದ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಏಪ್ರಿಲ್​ 09: ಆನ್​​ಲೈನ್​​ ಗೇಮಿಂಗ್ ಮತ್ತು ಬೆಟ್ಟಿಂಗ್  ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಹರಡಿಕೊಳ್ಳುತ್ತಿದೆ. ಹೀಗಾಗಿ ಈ ಆ್ಯಪ್​ಗಳಿಗೆ ಶೀಘ್ರದಲ್ಲೇ ಹೊಸ ಮಾನದಂಡ ತರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ  ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆನ್​​ಲೈನ್​​ ಗೇಮಿಂಗ್ ಮತ್ತು ಬೆಟ್ಟಿಂಗ್​ಗೆ ಕಡಿವಾಣ ಹಾಕಲು ಹೊಸ ಕಾನೂನು ತರುವ ಬಗ್ಗೆ ಚರ್ಚೆ ನಡೆದಿದೆ. ಇವುಗಳಿಂದ ದುರಾಸೆಗೆ ಬೀಳದಂತೆ ನಮ್ಮ ಜನರನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುವುದರ ಬಗ್ಗೆ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಈಗಾಗಲೇ ಕಾಯ್ದೆಗಳು ಇವೆ. ಆದರೆ ಕಾಯ್ದೆಗಳನ್ನ ಸಮರ್ಪಕವಾಗಿ ಜಾರಿ ಮಾಡಬೇಕು ಮತ್ತು ಹೆಚ್ಚುವರಿ ಕಾಯ್ದೆಗಳನ್ನ ಸೇರಿಸುವ ಬಗ್ಗೆ ಚರ್ಚೆ ನಡೆದಿದೆ. ಗೇಮಿಂಗ್ ಇಂಡಸ್ಟ್ರಿ ಮತ್ತು ಸಾರ್ವಜನಿಕರು, ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯಿಂದ ಸಲಹೆ ಪಡೆದು ಒಂದು ಡ್ರಾಫ್ಟ್ ರೆಡಿ ಮಾಡಲು ಗೃಹ ಸಚಿವರು ಆದೇಶ ಕೊಡಲಾಗಿದೆ.

ಆನ್​ಲೈನ್​ ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್​ಗಳಿಗೆ ಶೀಘ್ರದಲ್ಲೇ ಕೆಲ ಮಾನದಂಡಗಳನ್ನು ತರಲಾಗುತ್ತದೆ. ಗೇಮಿಂಗ್ ಆ್ಯಪ್​ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರಕ್ಕೆ ಕಷ್ಟದ ಕೆಲಸ. ಕೇವಲ ನಮ್ಮ ದೇಶ ಅಷ್ಟೇ ಅಲ್ಲ, ಬೇರೆ ದೇಶದ ಗೇಮಿಂಗ್ ಆ್ಯಪ್​ಗಳು ಇವೆ. ಕಾನೂನು ಬಾಹಿರವಾಗಿರುವುದನ್ನು ಮೊದಲು ನಿಷೇಧ ಮಾಡಬೇಕು. ಲೀಗಲ್ ಆಗಿ ಇದ್ದರೆ ನಿಯಂತ್ರಣ ಹೇಗೆ ಮಾಡಬೇಕೆಂದು ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ

ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ಯಾದಗಿರಿ ಜಿಲ್ಲೆಯ ಶಹಾಪುರ ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಸುರಪುರ ತಾಲೂಕಿನ ಕಕ್ಕಸಗೇರಾ ತಾಂಡಾದ ಪುಂಡಲೀಕ ಮತ್ತು ಏವೂರು ತಾಂಡಾದ ಹರಿಪ್ರಸಾದ್ ಬಂಧಿತರು. ಮೂರು ಮೊಬೈಲ್ ಸಹಿತ 6.99 ಲಕ್ಷ ರೂ. ನಗದು ಜಪ್ತಿ‌‌ ಮಾಡಲಾಗಿದೆ. ಶಹಾಪುರ ಪೋಲಿಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಮಡಿವಾಳೇಶ್ವರ ಏರಿಯಾದಲ್ಲಿ ಘಟನೆ ನಡೆದೆ. RCB ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ Cric365DAY ಆ್ಯಪ್​ನಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ಇಬ್ಬರು ದಂಧೆಕೋರರು ತೊಡಗಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಎಸ್​ಎಂ‌ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಲಾಗಿದೆ.