ಮಾ 22ರಂದು ಕರ್ನಾಟಕ ಬಂದ್: ಏನಿರುತ್ತೆ-ಏನಿರಲ್ಲ? ಇಲ್ಲಿದೆ ವಿವರ

ಬೆಂಗಳೂರು, ಮಾರ್ಚ್​ 19: ಮಹಾರಾಷ್ಟ್ರದಲ್ಲಿ ಕೆಎಸ್​ಆರ್​ಟಿಸಿ (KSRTC) ಸಿಬ್ಬಂದಿ ಮೇಲೆ ಹಲ್ಲೆ, ಬಸ್‌ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆಯಲಾಗಿದೆ. ಹೀಗಾಗಿ ಮರಾಠಿಗರ ಅಟ್ಟಹಾಸ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸಿಡಿದು ನಿಂತ್ತಿದ್ದು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್‌ಗೆ (Bandh) ಕರೆ ನೀಡಲಾಗಿದೆ. ಬಂದ್​ಗೆ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ ಬೆಂಬಲ ನೀಡಿದ್ದು, ಇದೀಗ ಓಲಾ, ಉಬರ್, ಆಟೋ ಸಂಘಗಳು ಕೂಡ ಬಂದ್​​ಗೆ ಬೆಂಬಲ ಸೂಚಿಸಿದೆ. ಹೀಗಾಗಿ ನಾಳೆ ಓಲಾ, ಉಬರ್, ಆಟೋಗಳನ್ನು ನಂಬಿ ರಸ್ತೆಗಿಳಿಯುವ ಮುನ್ನ ಜನರು  ಯೋಚಿಸುವಂತಾಗಿದೆ.

ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ಹಲ್ಲೆಯಾಗಿರುವುದನ್ನ ನಾವು ಖಂಡಿಸಿ ಬಂದ್ ಮಾಡುತ್ತಿದ್ದೇವೆ. ಇಡಿ ಆಟೋ ರಿಕ್ಷಾ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಶ್ರೀ ನಿವಾಸ್ ಹೇಳಿದ್ದಾರೆ.

ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಅಶೋಕ್ ಪ್ರತಿಕ್ರಿಯಿಸಿದ್ದು, ನಾಡು, ನುಡಿ, ಭಾಷೆಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತೇವೆ. ಎಲ್ಲಾ ಹೋರಾಟಗಳಿಗೆ ನಾವು ಸದಾಕಾಲ ಬೆಂಬಲ ನೀಡುತ್ತಿವೆ. ಸುಮಾರು ಎರಡು ಲಕ್ಷ ಓಲಾ, ಉಬರ್ ಬಂದ್ ಮಾಡುತ್ತೇವೆ ಎಂದಿದ್ದಾರೆ.

ಅದೇ ರೀತಿಯಾಗಿ ಕಾರ್ಮಿಕ ಪರಿಷತ್ ಸಂಪೂರ್ಣ ನಾಡಿನ ಹಿತಕ್ಕಾಗಿ ಬೆಂಬಲ ಇದೆ. ಸ್ವಯಂವಾಗಿ ನಾವು ಕೆಲಸಕ್ಕೆ ಗೈರಾಗುವು ಮೂಲಕ ಬೆಂಬಲ ನೀಡುತ್ತೇವೆ. ಎಲ್ಲಾ ಕಾರ್ಮಿಕ ಇಲಾಖೆಗಳ ಕಾರ್ಮಿಕರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ಕಾರ್ಮಿಕ ಪರಿಷತ್ತು ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ತಿಳಿಸಿದ್ದಾರೆ.

ಹೋಟೆಲ್ ಅಸೋಸಿಯೇಷನ್​​ನಿಂದ ನೈತಿಕ ಬೆಂಬಲ

ಬಂದ್​ ದಿನ ಎಂದಿನಂತೆ ಹೋಟೆಲ್​​ಗಳು ತೆರೆದಿರುತ್ತೆ. ಆ ಮೂಲಕ ಹೋಟೆಲ್ ಅಸೋಸಿಯೇಷನ್​​ನಿಂದ ಕೇವಲ ನೈತಿಕ ಬೆಂಬಲ ನೀಡಲಾಗುತ್ತಿದೆ. ಹೋಟೆಲ್‌ ಅಗತ್ಯ ಸೇವೆಯಾಗಿರುವುದರಿಂದ ಓಪನ್ ಮಾಡಲಾಗುತ್ತಿದೆ ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಸ್ಟಷ್ಟನೆ ನೀಡಿದ್ದಾರೆ.

ಬಂದ್​​ಗೆ ಸಾರ್ವಜನಿಕರ ಬೆಂಬಲ 

ಇನ್ನು ಕನ್ನಡ ಉಳೀಬೇಕು ಅಂದರೆ ಸಾರ್ವಜನಿಕರು ಬೆಂಬಲ ಕೊಡಬೇಕು. ಆದರೆ ಬಂದ್ ಹೆಸರಲ್ಲಿ ಶಾಂತಿ ಕದಡೋದು ಬೇಡ. ಶಾಂತಿಯುತ ಬಂದ್​​ಗೆ ಬೆಂಬಲ ಇದೆ ಎಂದು ಜನರು ಹೇಳಿದ್ದಾರೆ. ಮರಾಠಿಗರ ದೌರ್ಜನ್ಯದ ವಿರುದ್ಧ ಕ್ರಮ ಆಗಬೇಕು. ಕನ್ನಡಿಗರಾಗಿ ಕನ್ನಡದ ಹೋರಾಟಕ್ಕೆ ಸಾಥ್ ಕೊಡುತ್ತೇವೆ. ಸರ್ಕಾರ ಕೂಡ ಇದರ ಬಗ್ಗೆ ಗಮನ ಹರಿಸಬೇಕು ಎಂದು ಕರ್ನಾಟಕ ಬಂದ್​ಗೆ ಸಿಟಿಮಂದಿ ಬೆಂಬಲ ಸೂಚಿಸಿದ್ದಾರೆ.

ಬಂದ್ ದಿನಾಂಕ ಬದಲಾಯಿಸುವಂತೆ ಮನವಿ

ಇನ್ನು 1ನೇ ತರಗತಿಯಿಂದ 9ನೇ ತರಗತಿವರೆಗೆ ವಿವಿಧ ಹಂತದ ಪರೀಕ್ಷೆ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಬಂದ್ ದಿನಾಂಕ ಬದಲಾಯಿಸುವಂತೆ ಕನ್ನಡ ಒಕ್ಕೂಟಗಳಿಗೆ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿದ್ದಾರೆ.

1ನೇ ತರಗತಿಯಿಂದ 9ನೇ ತರಗತಿವರೆಗೆ ವಿವಿಧ ಹಂತದ ಪರೀಕ್ಷೆಗಳಿವೆ. ಈಗ ಬಂದ್ ದಿನಾಂಕ ಘೋಷಣೆಯಿಂದ ಸಮಸ್ಯೆಯಾಗಲಿದೆ. ಬಂದ್​​​ ವೇಳೆ ಮಕ್ಕಳಿಗೆ ಶಾಲೆಗಳಿಗೆ ರಜೆ ಕೊಡೋದಕ್ಕೆ ಸಾಧ್ಯವಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಬಂದ್ ದಿನಾಂಕ ಬದಲಾಯಿಸಬೇಕು ಎಂದಿದ್ದಾರೆ.

ಏನಿರುತ್ತೆ

  • ಆಸ್ಪತ್ರೆ
  • ಮೆಡಿಕಲ್​​
  • ಹಾಲು
  • ಅಗತ್ಯವಸ್ತುಗಳು
  • ಮೆಟ್ರೋ

ಏನಿರಲ್ಲ

  • ಓಲಾ, ಉಬರ್, ಆಟೋ

ಯಾರೆಲ್ಲಾ ಬೆಂಬಲ

  • ಓಲಾ, ಊಬರ್ ಟ್ಯಾಕ್ಸಿ ಅಸೋಸಿಯೇಷನ್​​
  • ಎರಡು ಆಟೋ ಅಸೋಸಿಯೇಷನ್​​
  • ಎಪಿಎಂಸಿ ಸಂಘಟನೆ ಬೆಂಬಲ

50-50 ಬೆಂಬಲ

  • ಕೆಲ ಸಾರಿಗೆ ನೌಕರ ಸಂಘದಿಂದ
  • ಸಿನಿಮಾ ಥಿಯೇಟರ್, ಚಲನಚಿತ್ರ ವಾಣಿಜ್ಯ ಮಂಡಳಿ
  • ಹೋಟೆಲ್ ಸಂಘಟನೆ
  • ಮಾಲ್​
  • ಬೇಕರಿ
  • ಬಾರ್​ ಆ್ಯಂಡ್​ ರೆಸ್ಟೋರೆಂಟ್​
  • ಅಂಗಡಿ‌ ಮುಗ್ಗಟ್ಟು
  • ಬೀದಿ ಬದಿ ವ್ಯಾಪಾರ

ಕರ್ನಾಟಕ ಬಂದ್ ಯಶಸ್ವಿ ಮಾಡೇ ಮಾಡುತ್ತೇವೆ: ವಾಟಾಳ್ ನಾಗರಾಜ್

ಬಂದ್​ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್​​, ಮಾ.22 ಕ್ಕೆ ಕರ್ನಾಟಕ ಬಂದ್ ಯಶಸ್ವಿ ಮಾಡೇ ಮಾಡುತ್ತೇವೆ. ಈಗಾಗಲೇ ಬಹುತೇಕ ಸಂಘಟನೆಗಳು ಬೆಂಬಲ ಕೊಟ್ಟಿವೆ. ಮರಾಠಿಗರ ಪುಂಡಾಟಿಕೆ ಮರಾಠಿಗರ ಅಟ್ಟಹಾಸ, ಎಂ.ಇ.ಎಸ್ ನಿಷೇಧ ಮಾಡಬೇಕು. ಕಳಸಾ ಬಂಡೂರಿ ಮಹಾದಾಯಿ ಯೋಜನೆ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡವೇ ಬೇಡ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕು. ಕನ್ನಡ ಕಂಡಕ್ಟ‌ರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕು ಎಂದಿದ್ದಾರೆ.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗುವುದು. ಕನ್ನಡಿಗರು ಈ ಬಂದ್‌ಗೆ ಕೈಜೋಡಿಸಬೇಕು. ಸಮಗ್ರ ಕನ್ನಡಿಗರಿಗಾಗಿ ಕನ್ನಡಿಗರ ಗೌರವ ಸ್ವಾಭಿಮಾನಕ್ಕೆ, ಕನ್ನಡಕ್ಕಾಗಿ ಕರ್ನಾಟಕ ಬಂದ್ ಮಾಡಲಾಗುತ್ತದೆ. ಬೆಳಗಾವಿಯಿಂದ ಚಾಮರಾಜನಗರವರೆಗೆ ಬಂದ್​​ ಮಾಡಲಾಗುವುದು. ಬೆಳಗಾವಿ ಕನ್ನಡಿಗರ ಕೈಯಲ್ಲಿ ಇಲ್ಲ ಮರಾಠಿಗರ ಕೈಯಲ್ಲಿ ಇದೆ ಎಂದು ಹೇಳಿದ್ದಾರೆ.