ಬೆಳಗಾವಿ: ನಿರ್ವಾಹಕನ ಮೇಲೆ ಹಲ್ಲೆ ಕೇಸ್​, ನಾಲಿಗೆ ಹರಿಬಿಟ್ಟ ಎಂ​ಇಎಸ್​ ಮುಖಂಡನ ವಿರುದ್ಧ ಎಫ್​ಐಆರ್​

ಬೆಳಗಾವಿ, ಫೆಬ್ರವರಿ 24: ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟದ್ದ ಎಂ​ಇಎಸ್​ ಮುಖಂಡನ ಶುಭಂ‌ ಶಳಕೆ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್​ಎಸ್​ ಕಾಯ್ದೆ 192, 352, 353 ಸೆಕ್ಷನ್ ಅಡಿ ಎಫ್​ಐಆರ್​ ದಾಖಲಾಗಿದೆ.

ಎಂಇಎಸ್ ಮುಖಂಡ ವಿಡಿಯೋದಲ್ಲಿ ನೀಡಿದ್ದ ಹೇಳಿಕೆ

ಎಂಇಎಸ್ ಮುಖಂಡ ಶುಭಂ ಶಳಕೆ, “ಕನ್ನಡ ಪರ ಹೋರಾಟಗಾರರು ನಾಲಾಯಕರು. ನಿರ್ವಾಹಕ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ. ಇಂತಹ ನೀಚ, ನಾಲಾಯಕ ನಿರ್ವಾಹಕ ಪರ ನಿಂತು ಕನ್ನಡ ಪರ ಸಂಘಟನೆಗಳು ಸಹ ನಾಲಾಯಕರು” ಅಂತ ಎಂದು ಬೆಳಗಾವಿ ನೆಲದಲ್ಲೇ ನಿಂತುಕೊಂಡೇ ನಾಲಿಗೆ ಹರಿ ಬಿಟ್ಟಿದ್ದನು.

ಮತ್ತೋರ್ವ ಆರೋಪಿಯ ಬಂಧನ

ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಮೋಹನ್ ಹಂಚಿನಮನಿ ಎಂಬಾತನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಐದಕ್ಕೇರಿದ್ದು ನಾಪತ್ತೆಯಾದ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆದಿದೆ.

ಬಸ್​ ಸಂಚಾರ ಸ್ಥಗಿತ

ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆಯಿಂದ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ಬಸ್ ಸಂಚಾರಕ್ಕೆ ತೊಂದರೆಯಾಗಿದೆ. ಮಹಾರಾಷ್ಟ್ರ-ಕರ್ನಾಟಕ ಬಸ್ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿಯಿಂದ ಮಹರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ವಾಯುವ್ಯ ಸಾರಿಗೆಯ ಸುಮಾರು 150ಕ್ಕೂ ಅಧಿಕ ಬಸ್​ಗಳು ಗಡಿವರೆಗೂ ಮಾತ್ರ ಸಂಚರಿಸುತ್ತಿವೆ. ಬಸ್​ಗಳು ಇಲ್ಲದ ಕಾರಣ ಬೆಳಗಾವಿ, ಕೊಲ್ಲಾಪುರ, ಪುಣೆಯಲ್ಲಿ ಕರ್ನಾಟಕದ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಸಂಸದ ಗೋವಿಂದ್ ಕಾರಜೋಳ ಕೂಡ ಸರ್ಕಾರ ಇದನ್ನು ಬಗೆ ಹರಿಸಿ, ಬಸ್ ಸಂಚಾರ ಆರಂಭಿಸಿ ಒತ್ತಾಯಿಸಿದ್ದರು.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೋಮಾವಾರ (ಫೆ.24) ಬೆಳಗಾವಿ ಭೇಟಿ ನೀಡಲಿದ್ದಾರೆ. ಬೆಳಗಾವಿ ಘಟಕ್ಕಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಬಸ್ ಆರಂಭದ ಕುರಿತು ಕೂಡ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.