
ಮಂಗಳೂರು: ವ್ಯಕ್ತಿಯೊಬ್ಬ 14 ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ ಭಾವನಾತ್ಮಕ ಕ್ಷಣಗಳಿಗೆ ನಗರದ ಸೇವಾ ಸಂಸ್ಥೆ ವೈಟ್ ಡೌಸ್ ಸಾಕ್ಷಿಯಾಯಿತು. ಶಿವಕುಮಾರ್(45) ಮರಳಿ ಕುಟುಂಬ ಸೇರಿದವರು.
2008ರಲ್ಲಿ ಛತ್ತೀಸ್ಗಢ ಮೂಲದ ಶಿವಕುಮಾರ್ ತನ್ನ ಕುಟುಂಬದೊಂದಿಗೆ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ದೆಹಲಿಗೆ ತೆರಳಿದ್ದರು. ಈ ವೇಳೆ ಶಿವಕುಮಾರ್ ಅವರ ತಾಯಿ ಕಟ್ಟಡದ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ದುರ್ಘಟನೆಯ ಬಳಿಕ ಅವರ ಕುಟುಂಬ ಛತ್ತೀಸ್ಗಢಕ್ಕೆ ಮರಳಲು ನಿರ್ಧರಿಸಿ, ದೆಹಲಿಯ ರೈಲು ನಿಲ್ದಾಣದಿಂದ ಛತ್ತೀಸ್ಗಢಕ್ಕೆ ಪ್ರಯಾಣಿಸಿತ್ತು. ಆದರೆ ಶಿವಕುಮಾರ್ ಕುಟುಂಬದಿಂದ ಬೇರ್ಪಟ್ಟಿದ್ದರು. ಆತನ ಕುಟುಂಬಸ್ಥರು ಮರಳಿ ದೆಹಲಿಗೆ ಬಂದು ಎಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ.

ವೈಟ್ಡೌಸ್ ಸಂಸ್ಥೆಯ ಆಶ್ರಯ: 2010ರಲ್ಲಿ ಮಂಗಳೂರಿನ ಎಸ್.ಪಿ ಕಚೇರಿಯ ಬಳಿಯಿಂದ ಸ್ಥಳೀಯರೊಬ್ಬರು ವೈಟ್ಡೌಸ್ ಸಂಸ್ಥೆಗೆ ಕರೆ ಮಾಡಿ ನಿರ್ಗತಿಕ ವ್ಯಕ್ತಿಯೊಬ್ಬ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ವೈಟ್ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನ್ ರಸ್ಕಿನಾ ಅವರು, ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ಶಿವಕುಮಾರ್ನನ್ನು ಕರೆದಂತು ಆಶ್ರಯ ಕಲ್ಪಿಸಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ಕಡಿಮೆ ಮಾತನಾಡುತ್ತಿದ್ದರು. ಆದರೆ, ಸಂಸ್ಥೆಯ ನಿರಂತರ ಆರೈಕೆ ಮತ್ತು ಔಷಧೋಪಚಾರದಿಂದ ಶಿವಕುಮಾರ್ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಸುಮಾರು ಹದಿನಾಲ್ಕು ವರ್ಷದ ಬಳಿಕ ಶಿವಕುಮಾರ್ ತನ್ನ ಮನೆಯವರನ್ನು ನೆನಪು ಮಾಡಿಕೊಂಡು, ತನ್ನ ಚಿಕ್ಕಪ್ಪನ ಕುರಿತು ಮಾಹಿತಿ ನೀಡಿದ್ದಾರೆ. ಆ ಮಾಹಿತಿ ಆಧರಿಸಿ ಹುಡುಕಿದಾಗ ಕುಟುಂಬ ಪತ್ತೆಯಾಗಿದೆ. ಶಿವಕುಮಾರ್ ಇರುವ ಬಗ್ಗೆ ಮಾಹಿತಿ ಪಡೆದ ಕುಟುಂಬ ಛತ್ತೀಸ್ಗಢದಿಂದ ಮಂಗಳೂರಿಗೆ ಬಂದಿದೆ. ಈ ವೇಳೆ ತನ್ನನ್ನು ಕಾಣಲು ಹಾತೊರೆಯುತ್ತಿದ್ದ ತಾಯಿ ಎರಡು ವರ್ಷಗಳ ಹಿಂದೆಯೇ ಮೃತಪಟ್ಟ ವಿಚಾರ ತಿಳಿದು ಶಿವಕುಮಾರ್ ಕಂಬನಿ ಮಿಡಿದರು.
