ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿ ಸಾವಿನ ಹಿಂದೆ ಲವ್​ ಕಹಾನಿ, ಅಸಲಿಗೆ ಟಾರ್ಗೆಟ್ ಆಗಿದ್ದೇ ಒಬ್ಬ, ಬಲಿಯಾಗಿದ್ದು ಮಾರ್ವೇಶ್

ಬೆಂಗಳೂರು, (ಜುಲೈ 28):  ನಗರದ ಬಾಣಸವಾಡಿ ಸಮೀಪದ ವಿನ್ಸೆಂಟ್ ಪೆಲ್ಲೋಟಿ ಕಾಲೇಜಿನ ವಿದ್ಯಾರ್ಥಿ ಮಾರ್ವೇಶ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ವೇಳೆ ಲವ್​ ಕಹಾನಿ ಬಟಾಬಯಲಾಗಿದೆ. ಅಸಲಿಗೆ ಟಾರ್ಗೆಟ್ ಆಗಿದ್ದೇ ಒಬ್ಬ. ಆದ್ರೆ, ಏನು ಮಾಡದ ತಪ್ಪಿಗೆ ಮೃತಪಟ್ಟವನೇ ಮಾರ್ವೇಶ್. ಹೌದು.. ಸ್ನೇಹಿತನ ಪ್ರೀತಿ-ಪ್ರೇಮಕ್ಕೆ ಮಾರ್ವೇಶ್ ಬಲಿಯಾಗಿದ್ದಾನೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಠಾಣೆ ಪೊಲೀಸರು ಒಟ್ಟು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಬಂಧಿತ ಆರೋಪಿಗಳು. ಬಂಧಿತರ ತನಿಖೆ ವೇಳೆ ಲವ್​ ಸ್ಟೋರಿ ಬಯಲಿಗೆ ಬಂದಿದೆ.

ಬಾಣಸವಾಡಿ ಸಮೀಪದ ವಿನ್ಸೆಂಟ್ ಪೆಲ್ಲೋಟಿ ಕಾಲೇಜಿನಲ್ಲಿ ಮಾರ್ವೇಶ್‌ ಬಿಕಾಂ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಮಾರ್ವೇಶ್‌ ಸ್ನೇಹಿತ ಪ್ರೀತಿಸುತ್ತಿದ್ದು, ಈ ವಿಚಾರವಾಗಿ ಮತ್ತೊಂದು ವಿದ್ಯಾರ್ಥಿ ಗುಂಪಿನೊಂದಿಗೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಮಾರ್ವೇಶ್​ನನ್ನು ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿ ಕಳುಹಿಸಿದ್ದಾರೆ. ಇದರಿಂದ ಅಸ್ವಸ್ಥಗೊಂಡಿದ್ದ ಮಾರ್ವೇಶ್​ ವಾಂತಿ ಮಾಡಿಕೊಂಡು ಮೃತಪಟ್ಟಿದ್ದ ಎನ್ನುವ ಅಂಶ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಕೃತ್ಯದ ಹಿಂದೆ ಲವ್​ ಕಹಾನಿ

ಮಾರ್ವೇಶ್ ಸ್ನೇಹಿತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದ್ರೆ, ಆ ಹುಡುಗಿ ಒಪ್ಪಿಕೊಂಡಿರಲ್ಲಿಲ್ಲ. ಅಲ್ಲದೇ ಆಕೆ ಬೇರೆ ಯುವಕ ಲವ್​ನಲ್ಲಿ ಬಿದ್ದಿದ್ದಳು. ಆದರೂ ಬಿಡದ ಮಾರ್ವೇಶ್​ನ ಗೆಳೆಯ ಪ್ರೀತಿಸುವಂತೆ ಸತಾಯಿಸುತ್ತಿದ್ದ. ಅಲ್ಲದೇ ಈ ಬಗ್ಗೆ ಆಕೆಗೆ ಕೆಟ್ಟ ಕೆಟ್ಟದಾಗಿ ಮೆಸೆಜ್ ಕಳುಹಿಸಿದ್ದ. ಇದರಿಂದ ಕೋಪಗೊಂಡ ಯುವತಿ ತನ್ನ ಬಾಯ್​ ಫ್ರೆಂಡ್​ಗೆ ಹೇಳಿದ್ದಾಳೆ. ಬಳಿಕ ಆಕೆಯ ಬಾಯ್​ ಫ್ರೆಂಡ್ ಮಾರ್ವೇಶನ ಸ್ನೇಹಿತನ ಫೋನ್​ಗೆ ಕರೆ ಮಾಡಿದ್ದಾನೆ. ಆದ್ರೆ, ಆತ ಫೋನ್​ ಸ್ವೀಕರಿಸದ ಕಾರಣ ಮಾರ್ವೇಶ್ ಸಂಪರ್ಕಿಸಿದ್ದ. ಫೋನ್​ನಲ್ಲಿ ಅದೇನು ಮಾತುಕತೆ ಆಯ್ತೋ ಏನೋ ಹುಡುಗಿಯ ಬಾಯ್​ ಫ್ರೆಂಡ್ ಹಾಗೂ ಆತನ ಸಹಚರರು ಜುಲೈ 26ರಂದು  ಬಂದು ಮಾರ್ವೇಶ್​ನನ್ನು ರೂಮ್​ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಗೆಳೆಯನಿಗೆ ಕರೆ ಮಾಡುವಂತೆ ಹೇಳಿದ್ದಾರೆ. ಅದರಂತೆ ಮಾರ್ವೇಶ್ ತನ್ನ ಮೊಬೈಲ್​ನಿಂದ ಹಲವು ಬಾರಿ ಕರೆ ಮಾಡಿದರೂ ಸ್ನೇಹಿತ ಫೋನ್ ಪಿಕ್ ಮಾಡಿಲ್ಲ. ಇದರಿಂದ ಕೊಪಗೊಂಡ ಯುವತಿಯ ಬಾಯ್ ಫ್ರೆಂಡ್ ಹಾಗೂ ಆತನ ಸಹಚರರು ಮಾರ್ವೇಶ್​ಗೆ ಮನಬಂದಂತೆ ಥಳಿಸಿ ಹಲ್ಲೆ ಮಾಡಿದ್ದಾರೆ. ಈ ಮೂಲಕ ಮಾರ್ವೇಶ್ ಸ್ನೇಹಿತನ ಮೇಲಿದ್ದ ಕೋಪ ಮಾರ್ವೇಶ್ ಮೇಲೆ ತೀರಿಸಿಕೊಂಡಿದ್ದಾರೆ.

ನಂತರ ಮಾರ್ವೇಶ್ ನನ್ನು  ಸ್ನೇಹಿತ ಸುನೀಲ್ ಎಂಬಾತನಿಗೆ ಒಪ್ಪಿಸಿದ್ದಾರೆ. ಆ ಬಳಿಕ ಮಾರ್ವೇಶ್ ವಾಂತಿ ಮಾಡಿಕೊಂಡಿದ್ದ. ಇದರಿಂದ ಸುನೀಲ್ ಸೇರಿದಂತೆ ಇತರೆ ಯುವಕರು ಮಾರ್ವೇಶ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದ್ರೆ, ಅಷ್ಟರಾಗಲೇ ಮಾರ್ವೇಶ್ ಮೃತಪಟ್ಟಿದ್ದ.

ಪೂರ್ವ ವಿಭಾಗದ ಡಿಸಿಪಿ ಪ್ರತಿಕ್ರಿಯೆ

ಈ ಪ್ರಕರಣದ ಸಂಬಮಧ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದು, ಎರಡು ದಿನದ ಹಿಂದೆ ಮಾರ್ವೇಶ್ ಎಂಬಾತನ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರು ಜನರ ಬಂಧನವಾಗಿದೆ. . ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಬಂಧಿತ ಆರೋಪಿಗಳು. ಇದರಲ್ಲಿ ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್ ಕಾಲೇಜು ಡ್ರಾಪೌಟ್ ಆಗಿದ್ದಾರೆ. ಜೊತೆಗೆ ಈ ಮೂವರ ವಿರುದ್ಧ ಅಪರಾಧ ಪ್ರಕರಣಗಳು ಸಹ ಇವೆ. ಕಾರ್ತಿಕ್ ವಿರುದ್ಧ ರಾಮಮೂರ್ತಿನಗರದಲ್ಲಿ ರೌಡಿ ಪಟ್ಟಿ ಸಹ ಇದೆ. ಆತನ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಬಾಂಡ್ ಸಹ ಬರೆಸಿಕೊಳ್ಳಲಾಗಿತ್ತು. ಬಂಧಿತರೆಲ್ಲರು 20 ರಿಂದ 21 ವರ್ಷದ ಯುವಕರಾಗಿದ್ದು, ಈ ಕೊಲೆಯಲ್ಲಿ ಭಾಗಿಯಾದ ಅಭಿ, ನೆಲ್ಸನ್ ವಿರುದ್ಧ ಮುಂದಿನ ದಿನಗಳಲ್ಲಿ ರೌಡಿ ಶೀಟ್ ಓಪನ್ ಮಾಡಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು

ಸದ್ಯ ಮರಣೋತ್ತರ ಪರಿಕ್ಷಾ ವರದಿಗಾಗಿ ಹೆಣ್ಣೂರು ಪೊಲೀಸರು, ಕಾಯುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ.