ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಪ್ರಕರಣ- ಮನೆಗೆ ಬೀಗ ಜಡಿದು ಯುವತಿ ಮನೆಯವರು ಎಸ್ಕೇಪ್

ಚಾಮರಾಜನಗರ: ಬೆಂಗಳೂರಿನಲ್ಲಿ ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮನೆಗೆ ಬೀಗ ಜಡಿದು ಯುವತಿ ಮನೆಯವರು ಎಸ್ಕೇಪ್ ಆಗಿದ್ದಾರೆ.

ಚಾಮರಾಜನಗರದ ಹರದನಹಳ್ಳಿ ಗ್ರಾಮದ ಆರೋಪಿ ಮನು ಹಾಗೂ ಕುಟುಂಬಸ್ಥರು ಮನೆ ಖಾಲಿ ಮಾಡಿದ್ದಾರೆ. ಇತ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಪೊಲೀಸರ ಬಳಿ ವರದಿ ಕೇಳಿದ ಜಿ.ಪರಮೇಶ್ವರ್, ಆದಷ್ಟು ಬೇಗ ಆರೋಪಿಗಳ ಬಂಧಿಸುವಂತೆ ಸೂಚಿಸಿದ್ದಾರೆ.

ಘಟನೆ ಸಂಬಂಧ ಎಫ್‍ಐಆರ್ ನಲ್ಲಿ ಏನಿದೆ..?: ಆರ್ ಆರ್ ನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್‌ ಆಗಿದ್ದು, ನಾನು ಪ್ರಥಮ ವರ್ಷದ ಸಿಎಸ್ ವಿದ್ಯಾಭ್ಯಾಸವನ್ನ ಎಸಿಎಸ್ ಕಾಲೇಜಿನಲ್ಲಿ ಮಾಡುತ್ತಿದ್ದು, ಜುಲೈ 15 ರಂದು ಬೆಳಗ್ಗೆ 8 ಗಂಟೆಗೆ ನಮ್ಮ ತಂದೆ ತಂದೆ ರಂಗನಾಥ್ ನನ್ನನ್ನು ಅವರ ಬೈಕ್‍ನಲ್ಲಿ ಎಸಿಎಸ್ ಕಾಲೇಜ್ ಬಳಿ ಬಿಟ್ಟು ಹೋಗಿದ್ದರು. ನಾನು 8.45 ಕ್ಕೆ ಕಾಲೇಜ್ ಒಳಗೆ ಹೋಗಿ ಈ ದಿನ ಕಾಲೇಜಿನಲ್ಲಿ ತರಗತಿ ಇಲ್ಲದೆ ಇದ್ದುದ್ದರಿಂದ ಈ ದಿನ ಬೆಳಗ್ಗೆ 9.30 ಗಂಟೆಗೆ ವಾಪಸ್ ಮನೆಗೆ ಹೋಗಲು ಎಸಿಎಸ್ ಕಾಲೇಜಿನಿಂದ (ACS College) ಬಿಎಸ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದೆ. ಈ ವೇಳೆ ಆರ್ ಆರ್ ನಗರ ಮೆಡಿಕಲ್ ಕಾಲೇಜ್ ಬಳಿ ಯಾವುದೋ ಒಂದು ಇನ್ನೋವಾ ಕಾರಿನಲ್ಲಿ ನನ್ನ ದೊಡ್ಡಪ್ಪ ಚಾಮರಾಜನಗರ ಜಿಲ್ಲೆಯೆ ಪರದನಹಳ್ಳಿ ಗ್ರಾಮದ ವಾಸಿಯಾದ ಮನುರವರು ನನ್ನನ್ನು ಬಲವಂತವಾಗಿ ಎಳೆದು ಅವರು ಬಂದಿದ್ದ ಕಾರಿನಲ್ಲಿ ನನ್ನನ್ನು ಹತ್ತಿಸಿಕೊಂಡು ಹೋದರು.

ಕಾರಿನಲ್ಲಿ ಇನ್ನೂ 6 ಜನರಿದ್ದು ನನ್ನ ಕಣ್ಣು, ಬಾಯಿಗೆ ಬಟ್ಟೆ ಕಟ್ಟಿ ನನ್ನನ್ನು ಅವರ ಕಾರಿನಲ್ಲಿ ಕಣಮಿಣಿಕೆ ಟೋಲ್ ಬಳಿ ಖಾಲಿ ಜಾಗದಲ್ಲಿ ಸುಮಾರು ಹೊತ್ತು ಕೂರಿಸಿಕೊಂಡು ನನ್ನ ದೊಡ್ಡಪ್ಪ, ಮನು ನನಗೆ ನೀನು ಲಹರಿಯನ್ನು ಪ್ರೀತಿ ಮಾಡುತ್ತಿಯಾ ನಿನಗೆ ಎಷ್ಟು ಬಾರಿ ಹೇಳುವುದು ಅಂತ ನನಗೆ ಕೈಗಳಿಂದ ಹೊಡೆದಿದ್ದಾರೆ. ನಂತರ ಈ ದಿನ ಬೆಳಗ್ಗೆ ಸುಮಾರು 10.30 ರಿಂದ 10.45 ರ ಸಮಯದಲ್ಲಿ ನನ್ನನ್ನು ಕಾರಿನಿಂದ ಇಳಿಸಿ ಅವರು ನನ್ನ ಮೈಮೇಲೆ ಅವರು ತಂದಿದ್ದ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಬಳಿಕ ಮನು ಹಾಗೂ ಅವರ ಜೊತೆ ಬಂದಿದ್ದವರು ಕಾರಿನಲ್ಲಿ ಹೊರಟು ಹೋದರು. ನಾನು ಬೆಂಕಿ ಹಾರಿಸಿಕೊಂಡು ಕೂಡಲೇ ಹೀರಾರಿಗೆ ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿದ್ದು, ಹೀರಾ, ಸರಸ್ವತಿ, ಕುಮಾರ್ ಸ್ಥಳಕ್ಕೆ ಬಂದು ನನ್ನನ್ನು 108 ಅಂಬುಲೆನ್‍ನಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದ್ದರಿಂದ ಮನು ಮತ್ತು ಅವರ ಜೊತೆ ಬಂದಿದ್ದವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ರೀತಿಯ ಕ್ರಮ ಜರಗಿಸಬೇಕೆಂದು ಕೋರುತ್ತೇನೆ ಅಂತಾ ಎಫ್‍ಐಆರ್‍ನಲ್ಲಿ ವಿವರಿಲಾಗಿದೆ.