ಕೊಪ್ಪಳದ ವಿದ್ಯಾರ್ಥಿನಿ ಪತ್ರಕ್ಕೆ ಸಿದ್ದರಾಮಯ್ಯ ಸಂತಸ – ಮರಳಿ ಪತ್ರ ಬರೆದ ಸಿಎಂ

ಕೊಪ್ಪಳ: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸಿದ್ದರಾಮಯ್ಯ ಕೊಪ್ಪಳದ ವಿದ್ಯಾರ್ಥಿನಿ ತಮಗೆ ಬರೆದಿರುವ ಅಭಿನಂದನಾ ಪತ್ರ ಓದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಸಾಮಾಜಿಕ ಕಾಳಜಿ ಕೊಂಡಾಡಿರುವ ಅವರು, ಮರಳಿ ವಿದ್ಯಾರ್ಥಿನಿಗೆ ಪತ್ರ ಬರೆದು ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ ಶ್ರೆಯಾಂಕ ವಿ ಮೆಣಸಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆ ಇತ್ತೀಚೆಗೆ ಅಭಿನಂದನಾ ಪತ್ರ ಬರೆದಿದ್ದಳು.

ಪತ್ರದ ಮುಖೇನ ವಿದ್ಯಾರ್ಥಿನಿ ಸಿದ್ದರಾಮಯ್ಯ 2013ರ ಅವಧಿಯಲ್ಲಿ ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳಾದ ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಪ್ರಸ್ತಾಪಿಸಿ, ಇದೇ ರೀತಿಯಾಗಿ ಈ ಬಾರಿಯೂ ಉತ್ತಮ ಆಡಳಿತ ನೀವು ನೀಡಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಳು.

ಸಾಮಾಜಿಕ ಕಳಕಳಿಯೊಂದಿಗೆ ಬರೆದಿರುವ ಈ ಪತ್ರವನ್ನು ಓದಿರುವ ಸಿದ್ದರಾಮಯ್ಯ, ಸಂತಸಗೊಂಡು ವಿದ್ಯಾರ್ಥಿನಿ ಶ್ರೇಯಾಂಕ ವಿ ಮೆಣಸಗಿಗೆ ಮರಳಿ ಪತ್ರ ಬರೆದಿದ್ದಾರೆ.

ಪ್ರೀತಿಯ ಶ್ರೇಯಾಂಕ, ತಾವು ಬರೆದ ಅಭಿನಂದನಾ ಪತ್ರ ತಲುಪಿದೆ. 8ನೇ ತರಗತಿ ಓದುತ್ತಿರುವ ನಿನಗಿರುವ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು. ಈ ಎಳೆಯ ವಯಸ್ಸಿನಲ್ಲಿ ಬಡವರು, ದೀನ-ದಲಿತರು, ರೈತರ ಬಗೆಗಿನ ನಿನ್ನ ಕಾಳಜಿ ಬೆರಗು ಮೂಡಿಸುವಂತಹದ್ದು. ಜೀವನದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯೆ ಕಲಿತು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗು ಎಂದು ಹಾರೈಸಿ ಮರಳಿ ಪತ್ರ ಬರೆದಿದ್ದು, ಗಮನ ಸೆಳೆದಿದೆ.