ಅಂತರ್ಜಾತಿ ವಿವಾಹಕ್ಕೆ ಕುಟುಂಬದವರ ವಿರೋಧ, ಪ್ರಿಯಕರನನ್ನು ಹುಡುಗಿಯ ಮನೆಗೆ ಮಾತುಕತೆಗೆ ಕರೆಸಿ ಹತ್ಯೆ ಮಾಡಿಬಿಟ್ಟರಾ?

ಆ ಗ್ರಾಮದಲ್ಲಿ ಯುವಕನೋರ್ವ ಪಕ್ಕದ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ. ಆದ್ರೆ ಇದು ಯುವತಿಯ ಹೆತ್ತವರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಯುವತಿ ಕುಟುಂಬ, ಯುವಕನ ಕುಟುಂಬಕ್ಕೆ ತೊಂದರೆ ನೀಡಲು ಆರಂಭಿಸಿತ್ತಂತೆ. ಹೀಗಾಗಿ ಆ ಇಡೀ ಕುಟುಂಬ, ತಮ್ಮೂರನ್ನೇ ಬಿಟ್ಟು ಹೋಗಲು ಮುಂದಾಗಿದ್ದರು. ಆದ್ರೆ ಮಾತುಕತೆ ನೆಪದಲ್ಲಿ ಊರಿಗೆ ಕರೆಸಿದ ಯುವತಿಯ ಮನೆಯವರು, ಯುವಕ ಮತ್ತು ಆತನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ಕೆಲವೇ ಗಂಟೆಯಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬಾರದ ಲೋಕಕ್ಕೆ ಹೋಗಿರುವ ಯುವಕ. ಮತ್ತೊಂದಡೆ ಕುಟುಂಬದವರ ಕಣ್ಣೀರು ಹಾಗೂ ಆಕ್ರೋಶ. ಇಂತಹ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಇನ್ನು ಬಾರದ ಲೋಕಕ್ಕೆ ಹೋಗಿರುವ ಯುವಕನ ಹೆಸರು ಗುರುಲಿಂಗಪ್ಪ ಮುಗಟಿ. ಇಪ್ಪತ್ತಾರು ವರ್ಷದ ಗುರುಲಿಂಗಪ್ಪ, ಮೊನ್ನೆ ಸಂಜೆ ಏಳು ಗಂಟೆ ಸಮಯದಲ್ಲಿ ತನ್ನದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ

ಇಲ್ಲಿ ಗುರುಲಿಂಗಪ್ಪನ ಸಾವಿಗೆ ಕಾರಣವಾಗಿದ್ದು ಪ್ರೀತಿ. ಹೌದು ಗುರುಲಿಂಗಪ್ಪ, ತನ್ನ ಪಕ್ಕದ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಆದ್ರೆ ಯುವತಿಯ ತಂದೆ, ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಂತೆ. ತನ್ನ ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರಂತೆ. ಹೀಗಾಗಿ ಗುರುಲಿಂಗಪ್ಪ, ಹೊನ್ನಕಿರಣಗಿ ಬಿಟ್ಟು, ಬೆಂಗಳೂರಿಗೆ ವರ್ಷದ ಹಿಂದೆ ಹೋಗಿದ್ದ. ಅಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದನಂತೆ.

ಆದ್ರೆ ವಾರದ ಹಿಂದೆ, ಗ್ರಾಮಕ್ಕೆ ಬಂದಿದ್ದ ಗುರುಲಿಂಗಪ್ಪ, ಕಲಬುರಗಿಯಲ್ಲಿ ಯುವತಿಯನ್ನು ಭೇಟಿಯಾಗಿದ್ದನಂತೆ. ಇದು ಯುವತಿಯ ಕುಟುಂಬದವರಿಗೆ ಗೊತ್ತಾಗಿತ್ತಂತೆ. ಅಂದೇ ಗುರುಲಿಂಗಪ್ಪನ ಮನೆಗೆ ನುಗ್ಗಿದ್ದ ಯುವತಿ ಕುಟುಂಬದವರು, ಗುರುಲಿಂಗಪ್ಪನ ಸಹೋದರರಿಗೆ ಥಳಿಸಿದ್ದರಂತೆ. ತಮ್ಮ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದರಂತೆ. ಹೀಗಾಗಿ ಗುರುಲಿಂಗಪ್ಪನ ಸಹೋದರರು, ಹೊನ್ನ ಕಿರಣಗಿ ಗ್ರಾಮವನ್ನೇ ತೊರೆದು, ಸಂಂಬಧಿಗಳ ಊರಲ್ಲಿ ನೆಲೆಸಲು ಮುಂದಾಗಿದ್ದರಂತೆ.

ಆದ್ರೆ ಮೊನ್ನೆ ಶನಿವಾರ ಮಧ್ಯಾಹ್ನ ಗುರುಲಿಂಗಪ್ಪನ ಸೋಹದರರಿಗೆ ಪೋನ್ ಮಾಡಿದ್ದ ಯುವತಿಯ ತಂದೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣಾ, ನಿಮ್ಮ ತಮ್ಮ ಗುರುಲಿಂಗಪ್ಪನನ್ನು ಕರೆದುಕೊಂಡು ಹೊನ್ನಕಿರಣಗಿ ಗೆ ಬರುವಂತೆ ಹೇಳಿದ್ದರಂತೆ. ಹೀಗಾಗಿ ಗುರುಲಿಂಗಪ್ಪನ ಸಹೋದರರು, ಮೊನ್ನೆ ಸಂಜೆ ತಮ್ಮ ಸಹೋದರನ ಜೊತೆ ಮರಳಿ ಹೊನ್ನಕಿರಣಗಿಗೆ ಬಂದಿದ್ದರಂತೆ.

ಆಗ ಯುವತಿ ತಂದೆ, ಸಹೋದರರು, ಸಂಬಂಧಿಗಳು ಗುರುಲಿಂಗಪ್ಪ ಮತ್ತು ಆತನ ಸಹೋದರರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದರಂತೆ. ಆಗ ಗುರುಲಿಂಗಪ್ಪನ ಸಹೋದರರನ್ನು ಗ್ರಾಮದ ಜನರು ಬೇರೆಡೆ ಕರೆದುಕೊಂಡು ಹೋದಾಗ, ಮನೆಯಲ್ಲಿ ಗುರುಲಿಂಗಪ್ಪ ಶವವಾಗಿ ಪತ್ತೆಯಾಗಿದ್ದಾನೆ.

ಗುರುಲಿಂಗಪ್ಪ ಮನೆಯಲ್ಲಿ ಇದ್ದಾಗ, ಯುವತಿ ತಂದೆ ಮತ್ತು ಸಂಬಂಧಿಗಳು ಮನೆಗೆ ಕೂಡಾ ನುಗ್ಗಿ, ಗುರುಲಿಂಗಪ್ಪಗೆ ಥಳಿಸಿದ್ದರಂತೆ. ಜೀವಸಹಿತ ಬಿಡೋದಿಲ್ಲಾ ಅಂತ ಹೇಳಿದ್ದರಂತೆ. ನಂತರ ಗುರುಲಿಂಗಪ್ಪ ಮನೆಯಲ್ಲಿ ಬಾಗಿಲು ಹಾಕಿಕೊಂಡು ಒಬ್ಬನೇ ಇದ್ದನಂತೆ. ಆಗ ಗುರುಲಿಂಗಪ್ಪ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಯುವತಿಯ ಕುಟುಂಬದವರೇ ತಮ್ಮ ಸಹೋದರನನ್ನು ಕೊಲೆ ಮಾಡಿದ್ದಾರೆ ಅಂತ ಗುರುಲಿಂಗಪ್ಪನ ಸಹೋದರರು ಆರೋಪಿಸಿದ್ದಾರೆ. ಇನ್ನು ಗುರುಲಿಂಗಪ್ಪ ಮತ್ತು ಆತ ಪ್ರೀತಿಸುತ್ತಿದ್ದ ಯುವತಿ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದಾರಂತೆ. ಅಂತರ್ಜಾತಿ ವಿವಾಹಕ್ಕೆ ಕುಟುಂಬದವರ ವಿರೋಧವಿತ್ತಂತೆ. ಆದ್ರೆ ಮಾತುಕತೆಗೆ ಕರೆಸಿ, ತಮ್ಮ ಸಹೋದರನ ಜೀವ ತಗೆದಿದ್ದಾರೆ ಅಂತ ಗುರುಲಿಂಗಪ್ಪನ ಸಹೋದರರು ಆರೋಪಿಸಿದ್ದಾರೆ.

ಸದ್ಯ ಗುರುಲಿಂಗಪ್ಪ ಸಾವಿನ ಬಗ್ಗೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇದೀಗ ಗುರುಲಿಂಗಪ್ಪ, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅಥವಾ ಕೊಲೆಯಾ ಅನ್ನೋದನ್ನು ಪತ್ತೆ ಮಾಡುತ್ತಿದ್ದಾರೆ. ಸದ್ಯ ಯುವತಿಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಬಾಳಿ ಬದುಕಬೇಕಿದ್ದ ಯುವಕ, ಪ್ರೀತಿ ಪ್ರೇಮಕ್ಕೆ ಬಲಿಯಾಗಿರುವದು ಮಾತ್ರ ದುರಂತವೇ ಸರಿ.