ಲಂಚ ಮುಕ್ತ ಕರ್ನಾಟಕ ಮಾಡುತ್ತೇವೆ: ಡಿಕೆಶಿ ಶಪಥ

ಬೆಂಗಳೂರು: ಲಂಚ ಮುಕ್ತ ಕರ್ನಾಟಕವನ್ನಾಗಿ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಶಪಥ ಮಾಡಿದರು.

ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಯಾರೂ ಲಂಚ ಕೇಳಬಾರದು. ಲಂಚ ಕೇಳದೆ ಕೆಲಸ ಮಾಡಿಕೊಡಬೇಕು. ನಾವು ಕಾಲ್ ಸೆಂಟರ್ ಮಾಡ್ತೀವಿ. ನಮ್ಮ ಕಾರ್ಯಕರ್ತರು ಲಂಚ ಕೇಳಿದ್ರೂ ಕೇಸ್ ಹಾಕೋದೇ. ಲಂಚ ಮುಕ್ತ ಕರ್ನಾಟಕ ಆಗಬೇಕು ಎಂದು ಒತ್ತಿ ಹೇಳಿದರು.

ಉಚಿತ ವಿದ್ಯುತ್ ಗೆ ನೋಂದಣಿ ಆರಂಭ ಆಗಿದೆ. ಬಹಳ ಆತುರಪಡಬೇಡಿ, ನೂಕುನುಗ್ಗಲು ಮಾಡಬೇಡಿ. ಸರ್ವರ್ ಕೂಡ ಕಡಿಮೆ ಆಗಿದೆ. ಅದಕ್ಕೆ ಗೃಹಲಕ್ಷ್ಮಿ ಯೋಜನೆಗೆ ನಾವು ಸ್ವಲ್ಪ ಟೈಮ್ ತೆಗೆದುಕೊಂಡಿದ್ದೀವಿ. ನಮ್ಮ ಕಾರ್ಯಕರ್ತರು ಪಕ್ಷ ಬೇಧ ಮರೆತು ಎಲ್ಲರಿಗೂ ಕೊಡಬೇಕು. ಬೇಡ ಅಂದೋರಿಗೆ ಬೇಡ, ಬೇಕು ಅಂದೋರಿಗೆ ಕೊಡೋಣ ಎಂದರು.

ರಾಮಲಿಂಗಾರೆಡ್ಡಿಯವರ ಮನೆಯ ಹೆಂಗಸರು ಬಸ್‍ನಲ್ಲಿ ಓಡಾಡಲ್ಲ ಅಂದ್ರೆ ಬೇಡ. ನಾರಾಯಣಸ್ವಾಮಿ ನಿಮ್ಮ ಮನೆಯವರನ್ನ ಕರೆದುಕೊಂಡು ಓಡಾಡಿ. ನಮ್ಮ ಮನೆಯವರು ಬೇಕಾದ್ರೂ ಅರ್ಜಿ ಹಾಕಲಿ ನಾನು ಬೇಡ ಎನ್ನಲ್ಲ. ಎರಡು ಸಾವಿರ ಬೇಕು, ಸಂಸಾರ ನಡೆಸಬೇಕು ಅಂತಿದ್ರೆ ಅರ್ಜಿ ಹಾಕಿಕೊಳ್ಳಲಿ ಎಂದು ಡಿಕೆಶಿ ತಿಳಿಸಿದರು.

ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡ್ತೀವಿ ಎಂದಿದ್ರು. ಪುಕ್ಸಟ್ಟೆ ಅಲ್ಲ, ಕಾಸು ಕಟ್ಟಿಸಿಕೊಂಡು ಕೊಡೋದು. ಈಗ ಎಫ್‍ಸಿಐ ನಿಂದ ರದ್ದು ಮಾಡಿದ್ದಾರೆ. ಒಂದು ಕಾಳು ಕಡಿಮೆ ಆದ್ರೂ ತೆಗೆದುಕೊಳ್ಳಬೇಡಿ ಅಂತಾ ಯಡಿಯೂರಪ್ಪ, ಬೊಮ್ಮಾಯಿ ಹೇಳ್ತಿದ್ದಾರೆ. ನಮ್ಮ ಯುವಕರಿಗೆ ಇನ್ನೂ ಉದ್ಯೋಗ ಕೊಡಿಸಿಲ್ಲ ನೀವು. ರೈತರ ಆದಾಯ ಯಾಕೆ ಡಬಲ್ ಮಾಡಲಿಲ್ಲ. 15 ಲಕ್ಷ ಯಾಕೆ ಹಾಕಿಸಲಿಲ್ಲ. ಇದರ ವಿರುದ್ಧ ಮೊದಲು ಪ್ರತಿಭಟನೆ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.

ಒಬ್ಬೊಬ್ಬರು ಒಂದೊಂದು ಮಾತಾಡೋದು. ಅಶೋಕ್.. ಓ ಚಕ್ರವರ್ತಿಯವರು ಮಾತಾಡ್ತಾರೆ. ಪಾಪ ಚಕ್ರವರ್ತಿ ನಮ್ಮೂರಿಗೆ ಬಂದಿದ್ರು. ಸಾಮ್ರಾಟ್ ಅಶೋಕ್ ಅವರು ಬಂದಿದ್ದರು ಎಂದು ಇದೇ ವೇಳೆ ಆರ್ ಅಶೋಕ್ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು.