ದೆಹಲಿಯಲ್ಲಿ ಅಪರಿಚಿತರಿಂದ ಗುಂಡಿನ ದಾಳಿ ಇಬ್ಬರು ಮಹಿಳೆಯರು ಸಾವು

ದೆಹಲಿಯ ಆರ್​ಕೆ ಪುರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತರು  ಗುಂಡಿನ ದಾಳಿ ನಡೆಸಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಎರಡು ಮಹಿಳೆಯರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನೈಋತ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಮನೋಜ್ ಸಿ ಮಾಹಿತಿ ನೀಡಿದ್ದು, ಆರ್‌ಕೆ ಪುರಂ ಪೊಲೀಸ್ ಠಾಣೆಗೆ ಬೆಳಗ್ಗೆ 4.40 ಕ್ಕೆ ಕರೆ ಬಂದಿದ್ದು, ಅಂಬೇಡ್ಕರ್ ಬಸ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ ಎನ್ನುವ ಮಾಹಿತಿ ಸಿಕ್ಕಿತ್ತು.

ಕರೆಗೆ ಸ್ಪಂದಿಸಿದ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದ್ದು, ಇಬ್ಬರು ಮಹಿಳೆಯರಾದ ಪಿಂಕಿ (30) ಮತ್ತು ಜ್ಯೋತಿ (29) ಅವರ ಮೇಲೆ ಗುಂಡು ಹಾರಿಸಲಾಗಿದ್ದು, ಅವರನ್ನು ಎಸ್‌ಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆ ಮಹಿಳೆಯರ ಸಹೋದರರನ್ನು ಈ ದುಷ್ಕರ್ಮಿಗಳು ಹುಡುಕುತ್ತಿರಬಹುದು ಎಂದು ಅಂದಾಜಿಸಲಾಗಿದೆ. ನಿಖರವಾದ ಕಾರಣ ತಿಳಿದುಬಂದಿಲ್ಲ, ಅವರ ಬಳಿ ಸಾಲ ತೆಗೆದುಕೊಂಡಿರಬಹುದು ಎಂದು ಹೇಳಲಾಗಿದೆ.

ಸುದೀರ್ಘ ತನಿಖೆಯ ನಂತರವೇ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.