ತನ್ನ 4 ಮಕ್ಕಳನ್ನು ಕೊಂದು, ನೇಣಿಗೆ ಶರಣಾದ ಮಹಿಳೆ

ರಾಜಸ್ಥಾನ: ನಾಲ್ವರು ಮಕ್ಕಳನ್ನು ಕೊಂದು ಮಹಿಳೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಬಾರ್ಮರ್​ ಜಿಲ್ಲೆಯ ಮಂಡಲಿ ಪ್ರದೇಶದಲ್ಲಿ ನಡೆದಿದೆ.

ನಾಲ್ವರು ಮಕ್ಕಳನ್ನು ಕೊಂದು ಮಹಿಳೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಬಾರ್ಮರ್​ ಜಿಲ್ಲೆಯ ಮಂಡಲಿ ಪ್ರದೇಶದಲ್ಲಿ ನಡೆದಿದೆ. ಶನಿವಾರ ಸಂಜೆ ತನ್ನ ಜೀವನವನ್ನು ಅಂತ್ಯಗೊಳಿಸುವ ಮೊದಲು ಮಹಿಳೆ ತನ್ನ ನಾಲ್ಕು ಮಕ್ಕಳನ್ನು ಧಾನ್ಯದ ಡ್ರಮ್‌ನಲ್ಲಿ ಹಾಕಿ ಅದರ ಮುಚ್ಚಳವನ್ನು ಮುಚ್ಚಿದ್ದಳು. ಮೃತರನ್ನು ಬನಿಯಾವಾಸ್ ಗ್ರಾಮದ ಊರ್ಮಿಳಾ (27) ಮತ್ತು ನಾಲ್ವರು ಮಕ್ಕಳಾದ ಭಾವನಾ (8), ವಿಕ್ರಮ್ (5), ವಿಮಲಾ (3) ಮತ್ತು ಮನೀಶಾ (2) ಎಂದು ಗುರುತಿಸಲಾಗಿದೆ.

ಪೋಲೀಸರ ಪ್ರಕಾರ, ಘಟನೆ ಸಂಭವಿಸಿದಾಗ ಆಕೆಯ ಪತಿ ಜೆಥರಾಮ್ ಕೆಲಸದ ನಿಮಿತ್ತ ಜೋಧ್‌ಪುರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಎಲ್ಲಾ ಐದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಮಹಿಳೆ ತನ್ನ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಎಸ್ಪಿ ಕಮಲೇಶ್ ಕುಮಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಘಟನೆ ಕುರಿತು ಮಹಿಳೆಯ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.